ನವದೆಹಲಿ: ಡಿಸೆಂಬರ್ 16ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ `ಅಮಾನವೀಯ ಸಾಮೂಹಿಕ ಅತ್ಯಾಚಾರ' ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಮನಮೋಹನ್ಸಿಂಗ್, ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಹೋರಾಟಗಾರರು ಶಾಂತಿ- ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ. ಭಾನುವಾರದ ಘರ್ಷಣೆ ಕುರಿತು ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಆಕ್ರೋಶ `ನ್ಯಾಯಸಮ್ಮತ' ಮತ್ತು `ಸಮರ್ಥನೀಯ'. ಆದರೆ, ಹಿಂಸಾಚಾರದಿಂದ ಉದ್ದೇಶ ಈಡೇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೂವರು ಹೆಣ್ಣು ಮಕ್ಕಳ ತಂದೆಯಾಗಿರುವ ತಮಗೆ ಈ ಪ್ರಕರಣದಿಂದ ನೋವಾಗಿದೆ ಎಂದಿದ್ದಾರೆ.
`ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಯುವತಿ ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸೋಣ. ಶಾಂತಿ- ಸಂಯಮದಿಂದ ಪೊಲೀಸರೊಂದಿಗೆ ವರ್ತಿಸಿ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗಲು ಸಹಕರಿಸೋಣ' ಎಂದು ಮನವಿ ಮಾಡಿದ್ದಾರೆ.