ಮುಂಬೈ: ಮಹಿಳೆಯರ ಅಭಿವ್ಯಕ್ತಿಗೆ ಸ್ವಾತಂತ್ರ್ಯ ಸಿಗುವುದು ಸಂಸ್ಕೃತಿಯ ಮಹತ್ವದ ಅಂಗ ಎಂದು ಲೇಖಕಿ ಸುನೀತಾ ಎಂ. ಶೆಟ್ಟಿ ಅವರು ಹೇಳಿದ್ದಾರೆ. ಅವರು ಕರ್ನಾಟಕ ಸಂಘದ ಮಹಿಳಾ ವಿಭಾಗವು ಇಲ್ಲಿ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಹಮ್ಮಿಕೊಂಡ `ಮಹಿಳಾ ಸಂಸ್ಕೃತಿ ಸಂಭ್ರಮ~ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಸಾಕಷ್ಟು ಪ್ರಗತಿ ಆಗಿದೆ. ಬದಲಾವಣೆಗೆ ಹೊಂದಿಕೊಂಡು ಹೋಗಬೇಕಾಗಿದೆ. ಗಂಡಸರು ಹೆಣ್ಣಿನ ಸಮಾನತೆಯ ಬಯಕೆ, ಆಕಾಂಕ್ಷೆಗಳು ಹೇಗೆ ಭಗ್ನಗೊಳ್ಳುತ್ತವೆ ಎನ್ನುವುದನ್ನು ಗಮನಿಸಬೇಕು ಎಂದು ಅವರು ಕೋರಿದರು. `ನಮ್ಮ ಸಂಸಾರ-ನಮ್ಮ ಸಂಸ್ಕೃತಿ- ನಮ್ಮ ಕ್ರಿಯಾಶೀಲತೆ~ ಎಂಬ ವಿಷಯದ ಕುರಿತು ಮಾತನಾಡಿದ ಗೀತಾ ಭಟ್ ಎಲ್. ಅವರು ಯಕ್ಷಗಾನದಿಂದ ನಮ್ಮ ಪುರಾಣಗಳು ಉಳಿದುಕೊಂಡಿವೆ ಎಂದು ಹೇಳಿ, ಯಕ್ಷಗಾನಕ್ಕೆ ವಾದಿರಾಜರ ಮತ್ತು ಶಿವರಾಮ ಕಾರಂತರ ಕೊಡುಗೆಗಳನ್ನು ಸ್ಮರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಕ್ಷತಾ ದೇಶಪಾಂಡೆ, ರೇಖಾ ಗುಣಕರ ಶೆಟ್ಟಿ, ಶಾರದಾ ಶೆಟ್ಟಿ, ವಿಜಯಲಕ್ಷ್ಮಿ ಆರ್ ಉದ್ಯಾವರ, ಕೃಪಾ ಪೂಜಾರಿ, ಅನಿತಾ ಪಿ. ಪೂಜಾರಿ ಡೊಂಬಿವಲಿ, ಸುಜಾತ ಶೆಟ್ಟಿ ಅವರನ್ನು ಡಾ. ಸುನೀತಾ ಶೆಟ್ಟಿ ಸನ್ಮಾನಿಸಿದರು.