ಬೆಂಗಳೂರು: ಬಜರಂಗ ದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ ಭಾನುವಾರ ಅಧಿಕೃತವಾಗಿ ಜೆಡಿಎಸ್ ಸೇರಿದರು.ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಎಚ್.ಡಿ.ಕುಮಾರಸ್ವಾಮಿ ಅವರು ಮಹೇಂದ್ರಕುಮಾರ್ ಅವರಿಗೆ ಧ್ವಜ ನೀಡಿ, ಪಕ್ಷಕ್ಕೆ ಸೇರಿಸಿಕೊಂಡರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಹಿಂದುಳಿದ ಮತ್ತು ಶೋಷಿತ ವರ್ಗದ ಮುಗ್ಧ,ಅಮಾಯಕ ಯುವಕರನ್ನು ಬಿಜೆಪಿ ಹಾಗೂ ಅದರ ಪರಿವಾರ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿವೆ. ಬಳಿಕ ಅದರ ರಾಜಕೀಯ ಲಾಭ ಪಡೆಯುತ್ತಿವೆ.ಇಂತಹ ಸಮಸ್ಯೆಗೆ ಈ ಪ್ರಕ್ರಿಯೆ ತಕ್ಕ ಉತ್ತರ ನೀಡಲಿದೆ’ ಎಂದರು.
‘ಬಿಜೆಪಿಯ ರಹಸ್ಯ ಕಾರ್ಯಸೂಚಿಗೆ ಬಲಿಯಾಗುತ್ತಿರುವ ಯುವಕರನ್ನು ಸರಿದಾರಿಗೆ ತರುವುದು ಸಮಾಜದ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಮಹೇಂದ್ರಕುಮಾರ್ ಈ ಹಿಂದೆ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಜನತೆಯೆ ಕ್ಷಮೆ ಯಾಚಿಸಿದ್ದಾರೆ. ಈಗ ಅವರು ಜೆಡಿಎಸ್ ಸೇರಿರುವುದು ಬಿಜೆಪಿಯ ಕೋಮುವಾದಿ ರಾಜಕಾರಣದ ವಿರುದ್ಧದ ಹೋರಾಟಕ್ಕೆ ಸಿಕ್ಕ ಜಯ’ ಎಂದು ಹೇಳಿದರು.
‘ನಮ್ಮಂತಹ ಯುವಕರ ಮುಗ್ಧತೆಯನ್ನು ದುರ್ಬಳಕೆ ಮಾಡಿ ಅಧಿಕಾರ ಹಿಡಿದ ಯಡಿಯೂರಪ್ಪ ರಾಕ್ಷಸನಂತೆ ರಾಜ್ಯವನ್ನು ಕಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಮಹೇಂದ್ರ ಕುಮಾರ್ ಘೋಷಿಸಿದರು.