ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಶಾಸಕ ಎಂ.ಶ್ರೀನಿವಾಸ್ ಹ್ಯಾಟ್ರಿಕ್ ಗೆಲುವಿಗಾಗಿ ಮತ್ತೊಮ್ಮೆ ಕಣದಲ್ಲಿದ್ದಾರೆ. ರೈತ ಸಂಘದ ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಇವರು, ನಂತರ ದಿನಗಳಲ್ಲಿ ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. 2004,08ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನಿಮ್ಮ ಪ್ರಚಾರ ಹೇಗಿದೆ?
ಉತ್ತಮ ಪ್ರತಿಕ್ರಿಯೆ ಇದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರ ಮಾಡಿ, ಹೋದ ಮೇಲೆ ಮತ್ತಷ್ಟು ಉತ್ತಮವಾಗಿದೆ.
ಹಿಂದಿನ ಚುನಾವಣೆಗಿಂತ ಈ ಚುನಾವಣೆ ಹೇಗೆ ಬಿನ್ನವಾಗಿದೆ?
ಕಳೆದ ಬಾರಿ ಇಲ್ಲದ ಕಾವೇರಿ ವಿವಾದ ವಿಷಯ ನಮ್ಮ ಮುಂದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನಡೆದುಕೊಂಡ ರೀತಿ ಜನರಿಗೆ ಬೇಸರ ತರಿಸಿದೆ. ಗೌಡರ ಹೋರಾಟವನ್ನು ಜನರಿಗೆ ತಿಳಿಸುತ್ತಿದ್ದೇವೆ.
ನಿಮಗೆ ಯಾಕೆ ಮತ ನೀಡಬೇಕು?
ಜನರ ನಡುವಿನಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅವರ ನಡುವೆ ಇದ್ದು ಕೆಲಸ ಮಾಡುತ್ತೇನೆ. ಮೆಡಿಕಲ್ ಕಾಲೇಜು, ಕಾವೇರಿ, ಲೋಕೋಪಯೋಗಿ ಭವನ, ಆಸ್ಪತ್ರೆಯನ್ನು ಸಾವಿರ ಹಾಸಿಗೆಗೆ ಹೆಚ್ಚಳ ಮಾಡಿಸಿದ್ದೇನೆ. ಬಸ್ ನಿಲ್ದಾಣ ಅಭಿವೃದ್ಧಿ ಹೋಬಳಿಗೊಂಡು ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳನ್ನು ಅಭಿವೃದ್ಧಿ ಪಡಿಸಿದ್ದೇನೆ.
ಬಂಡಾಯ ಅಭ್ಯರ್ಥಿಯನ್ನು ಹೇಗೆ ಎದುರಿಸುತ್ತಿದ್ದೀರಿ?
ಬಂಡಾಯ ಅಭ್ಯರ್ಥಿ ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇದೆ. ಪಕ್ಷದ ಎಲ್ಲ ಮುಖಂಡರೂ ನನ್ನೊಂದಿಗೆ ಇದ್ದಾರೆ. ಎಲ್ಲವೂ ಸರಿಯಾಗಿದೆ.
ನಿಮ್ಮ ಭರವಸೆಗಳು ಏನು?
ಜೆಡಿಎಸ್ ಸರ್ಕಾರವಿದ್ದಾಗ ಹೆಚ್ಚಿನ ಕೆಲಸ ಮಾಡಿದ್ದೆ. ಬಿಜೆಪಿ ಸರ್ಕಾರದಲ್ಲಿ ಅಷ್ಟು ಮಾಡಲು ಸಾಧ್ಯವಾಗಿಲ್ಲ.
ಮಾದರಿ ಮಂಡ್ಯ ನಿರ್ಮಾಣದ ಕನಸು ನನ್ನದಾಗಿದೆ. ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸುಧಾರಿಸಲಾಗುವುದು. ಮೂಲಸೌಕರ್ಯ ಒದಗಿಸುತ್ತೇನೆ.