ಬೆಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣವೊಂದರ ಆರೋಪಿಗಳಾದ ಪಾವಗಡದ ಗೋವಿಂದರಾಜು ಮತ್ತು ಕಾಮರಾಜು ಎಂಬುವರಿಗೆಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಜಾಮೀನು ನಿರಾಕರಿಸಿದ ತುಮಕೂರು ಜಿಲ್ಲಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಏಪ್ರಿಲ್ 22ರಂದು ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಗೋವಿಂದರಾಜು ಮತ್ತು ಕಾಮರಾಜು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಓಯಸಿಸ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಣದ ಆಮಿಷ ಒಡ್ಡಿ ಇವರು ಪಾವಗಡ ಪ್ರದೇಶದ ಅಮಾಯಕರನ್ನು ಅಕ್ರಮ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಒಟ್ಟು 82 ಜನರನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ಇವರು ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಈ ಪೈಕಿ 42 ಬಾಲಕಿಯರು ಮತ್ತು 16 ಮಂದಿ ಬಾಲಕರೂ ಇದ್ದರು. ಗೋವಿಂದರಾಜು ಮತ್ತು ಕಾಮರಾಜು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ ಅವರು, `ಇವರು ಜಾಮೀನಿಗೆ ಅರ್ಹರಲ್ಲ' ಎಂದು ಆದೇಶಿಸಿದರು.