ಬೆಂಗಳೂರು: `ಕ್ರಿಕೆಟ್ ಲೋಕ ಕಂಡಂತಹ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಅವರು ಉತ್ತಮ ವ್ಯಕ್ತಿಯಾಗಿದ್ದರು~ ಎಂದು ಮಾಜಿ ಕ್ರಿಕೆಟಿಗ ಯರಪಳ್ಳಿ ಪ್ರಸನ್ನ ಹೇಳಿದರು.
ಶನಿವಾರ ನಡೆದ `ಬಿಷನ್- ಪೋರ್ಟ್ರೇಟ್ ಆಫ್ ಎ ಕ್ರಿಕೆಟರ್~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕೃತಿಯನ್ನು ಸುರೇಶ್ ಮೆನನ್ ಅವರು ಬರೆದಿದ್ದಾರೆ.
ಬೇಡಿ ಜೀವನದ ಸಮಗ್ರ ಚಿತ್ರಣವನ್ನು ಮೆನನ್ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ಬೆಳೆದುಬಂದ ಹಾದಿ, ಆಟಗಾರನಾಗಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವ ವಿಷಯದ ಕುರಿತು ಮಾಜಿ ಕ್ರಿಕೆಟಿಗ ಪ್ರಸನ್ನ ಈ ಸಂದರ್ಭದಲ್ಲಿ ಸವಿಸ್ತಾರವಾಗಿ ಹೇಳಿದರು. ನಾಯಕರಾಗಿದ್ದ ಅವಧಿಯಲ್ಲಿ ಸಹ ಆಟಗಾರರೊಂದಿಗೆ ಹೇಗೆ ಬಾಂಧವ್ಯ ಉಳಿಸಿಕೊಂಡಿದ್ದರು ಎನ್ನುವ ನೆನಪುಗಳ ಬುತ್ತಿಯನ್ನು ಅವರು ಬಿಚ್ಚಿಟ್ಟರು.
`ಭಾರತ ತಂಡ 1971ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಬಿಷನ್ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಬೌಲಿಂಗ್ ವೈಖರಿಗೆ ಎದುರಾಳಿ ತಂಡ ತಲ್ಲಣಗೊಳ್ಳುತ್ತಿತ್ತು. ಎದುರಾಳಿ ತಂಡದಲ್ಲಿ ನಡುಕು ಹುಟ್ಟಿಸಲು ಪಂದ್ಯದ ಆರಂಭಕ್ಕೂ ಮುನ್ನ ಸಾಕಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸುತ್ತಿದ್ದರು. ಆದ್ದರಿಂದಲೇ ಅವರು ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡರು~ ಎಂದು ಪ್ರಸನ್ನ ಗುಣಗಾನ ಮಾಡಿದರು.
`ಈ ಅವಧಿಯಲ್ಲಿ ಸ್ಪಿನ್ ಭಾರತ ತಂಡದ ಪ್ರಮುಖ ಬೌಲಿಂಗ್ ಶಕ್ತಿ ಎನಿಸಿತ್ತು. `ಸ್ಪಿನ್~ ಎಂದರೆ ಭಾರತ ಎನ್ನುವಂತಿತ್ತು. ಆದ್ದರಿಂದಲೇ ಬೇಡಿ ಸಾಧನೆ ಎಲ್ಲರಿಗೂ ಗೊತ್ತಗಾಬೇಕು ಎನ್ನುವ ಕಾರಣದಿಂದ ಈ ಪುಸ್ತಕ ಬರೆದಿದ್ದೇನೆ~ ಎಂದು ಸುರೇಶ್ ಮೆನನ್ ಹೇಳಿದರು.
ಕ್ರೀಡಾಂಗಣದ ಮಧುರ ನೆನಪುಗಳ ಹೊತ್ತಿಗೆಗೆ ಮಾಜಿ ಕ್ರಿಕೆಟಿಗ ಬಿ.ಎಸ್. ಚಂದ್ರಶೇಖರ್ ತಮ್ಮ ನೆನಪಿನ ದಿನಗಳ ಬುತ್ತಿ ಸೇರಿಸಿದರು. ಬಿಷನ್ ಬೌಲರ್ ಮಾತ್ರವಲ್ಲ. ಅತ್ಯುತ್ತಮ ಬೌಲಿಂಗ್ ವಿಶ್ಲೇಷಕ ಸಹ ಆಗಿದ್ದರು ಎಂದರು. ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ಕೃತಿ ಬಿಡುಗಡೆ ಮಾಡಿದರು. ಬೇಡಿ 12 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 67 ಪಂದ್ಯಗಳನ್ನಾಡಿ 266 ವಿಕೆಟ್ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.