ಭಾಲ್ಕಿ: ಯೋಗ, ಧ್ಯಾನ, ಪ್ರಾರ್ಥನೆಗಳಲ್ಲಿ ತೊಡಗುವದರಿಂದ ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ರಾಷ್ಟ್ರಸೇವಿಕಾ ಸಮಿತಿಯ ಜಿಲ್ಲಾ ಕಾರ್ಯವಾಹಿಕಾ ಮೀರಾ ಮಂಠಾಳಕರ್ ಪ್ರತಿಪಾದಿಸಿದರು. ಭಾಲ್ಕಿ ಪಟ್ಟಣದ ಭಾಲ್ಕೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಈಚೆಗೆ ಹಮ್ಮಿಕೊಂಡ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸರಸ್ವತಿ ಬಿರಾದಾರ ಮಾತನಾಡಿ, 1936ರಲ್ಲಿ ಲಕ್ಷ್ಮಿಬಾಯಿ ಖೇಳಕರ್ ಅವರಿಂದ ಸ್ಥಾಪನೆಗೊಂಡ ರಾಷ್ಟ್ರಸೇವಿಕಾ ಸಮಿತಿಯು ಬಹು ದೊಡ್ಡ ಮಹಿಳಾ ಸಂಘಟನೆಯಾಗಿದ್ದು, ಉತ್ತಮ ಸಮಾಜಕ್ಕಾಗಿ ಸಂಘಟಿತ ಕಾರ್ಯ ಮಾಡುತ್ತಿದೆ ಎಂದರು. ಬಾಲಾಜಿ ಬಿರಾದಾರ, ಸೋಮನಾಥ ಮುದ್ದಾ ಮಾತನಾಡಿದರು. ಪಟ್ಟಣದ 15ಕ್ಕೂ ಅಧಿಕ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಸೂರ್ಯ ನಮಸ್ಕಾರದ ತರಬೇತಿ ಸ್ಪರ್ಧೆ ನಡೆಯಿತು. ವಿಜೇತ ಗುಂಪುಗಳಿಗೆ ಸದ್ಗುರು ಪ್ರತಿಭಾ ಶೋಧ ಪ್ರತಿಷ್ಠಾನದಿಂದ ಪುಸ್ತಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು. ಬಾಲಾಜಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಪಡೆದ 150ಕ್ಕೂ ಅಧಿಕ ಮಕ್ಕಳಿಗೆ ಸದ್ಗುರು ವಿದ್ಯಾಲಯದಿಂದ ಬಹುಮಾನ ವಿತರಿಸಲಾಯಿತು. ಸುನಿತಾ ಸಿಂಧೆ, ನಾಗರತ್ನ ಶೀಲವಂತ, ರಾಜೇಂದ್ರ ಪಾಂಚಾಳ, ಸುಜಾತಾ ಪಾಟೀಲ, ಲಕ್ಷ್ಮಿ ಸೊನಾಳೆ, ನಾಗರತ್ನಾ ಪ್ರಭಾ ಮುಂತಾದವರು ಇದ್ದರು.