ಹುಬ್ಬಳ್ಳಿ: `ಮಾರ್ಚ್ ಎರಡನೇ ವಾರದಲ್ಲಿ ಬಜೆಟ್ ಮಂಡಿಸುವ ಉದ್ದೇಶವಿದ್ದು, ಇದಕ್ಕಾಗಿ ಎಲ್ಲ ಪೂರ್ವ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಪೂರ್ತಿ ಒಂದು ತಿಂಗಳು ತಯಾರಿ ನಡೆಸಲಿದ್ದೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಆರ್ಎಸ್ಎಸ್ ಆಯೋಜಿಸಿರುವ `ಹಿಂದೂ ಶಕ್ತಿ ಸಂಗಮ~ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು, ವರದಿಗಾರರ ಜೊತೆ ಮಾತನಾಡಿದರು.
`ಇದೇ 30ರಿಂದ ಫೆಬ್ರುವರಿ 10ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬಜೆಟ್ಗೆ ಸಂಬಂಧಿಸಿದಂತೆ ಅಲ್ಲಿ ಬರುವ ಸಲಹೆಗಳನ್ನು ಆಲಿಸಲಿದ್ದೇನೆ. ಅಧಿವೇಶನ ಮುಗಿದ ನಂತರ ಒಂದು ತಿಂಗಳು ಬಜೆಟ್ ತಯಾರಿಗಾಗಿ ವಿಭಾಗ ಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸಿ ಸಂಘ-ಸಂಸ್ಥೆಗಳ ಸಲಹೆ ಪಡೆಯುತ್ತೇನೆ. ಪ್ರತಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದೇನೆ~ ಎಂದು ಅವರು ವಿವರಿಸಿದರು.
`ನೀವೇ ಬಜೆಟ್ ಮಂಡಿಸುವೀರಾ~ ಎಂದು ಪ್ರಶ್ನಿಸಿದಾಗ, `ಎಲ್ಲರಲ್ಲಿ ಇಂತಹ ಸಂಶಯ ಏಕೆ ಮೂಡಿದೆಯೋ ನನಗೆ ಗೊತ್ತಿಲ್ಲ. ನಾನಂತೂ ಅದಕ್ಕಾಗಿ ತಯಾರಿ ನಡೆಸಿದ್ದೇನೆ~ ಎಂದು ಉತ್ತರಿಸಿದರು.
ನಾಯಕತ್ವದ ವಿವಾದದ ಬಗೆಗೆ ಪ್ರಶ್ನಿಸಿದಾಗ, `ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನೊಬ್ಬ ಸ್ವಯಂಸೇವಕನಾಗಿ ಆರ್ಎಸ್ಎಸ್ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ~ ಎಂದರು. `ದೇಶಪ್ರೇಮದ ಆಧಾರದಲ್ಲಿ ಯುವಕರನ್ನು ಒಂದುಗೂಡಿಸುವ ಶಿಸ್ತುಬದ್ಧ ಸಂಘಟನೆ ಆರ್ಎಸ್ಎಸ್~ ಎಂದೂ ತಿಳಿಸಿದರು.