ಯುವ ಗಾಯಕ ಗಾಯಕಿಯರು ಹಾಡುತ್ತಿದ್ದರೆ ಕೇಳುತ್ತಿದ್ದ ಶ್ರೋತೃ ಸಮೂಹ ಖುಷಿಯಿಂದ ತಲೆದೂಗುತ್ತಿತ್ತು. ಆಗಾಗ ಸಿಳ್ಳೆ, ಚಪ್ಪಾಳೆ. ಗರುಡಾ ಮಾಲ್ ಪ್ರಾಯೋಜಿಸುತ್ತಿರುವ `ವಾಯ್ಸ ಆಫ್ ಬೆಂಗಳೂರು ಸೀಜನ್-5ರ~ ಕ್ವಾಟರ್ ಫೈನಲ್ನಲ್ಲಿ ಇಷ್ಟೇ ಅಲ್ಲದೆ ಇನ್ನೂ ಸಖತ್ ಮನರಂಜನೆಯಿತ್ತು.
ಜುಲೈ 22ರಂದು ಪ್ರಾರಂಭವಾದ ಸೀಜನ್5ಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಚಾಲನೆ ನೀಡಿದ್ದರು. ಇದು ಸಂಗೀತ ಲೋಕದಲ್ಲಿ ಯುವ ಗಾಯಕರ ಹೊಸ ಅಲೆಯನ್ನೇ ಸೃಷ್ಟಿಸುತ್ತಿದ್ದು, ನವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುತ್ತಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಸುಮಧುರ ಕಂಠಕ್ಕಾಗಿ ನಡೆದ ಅನ್ವೇಷಣೆಯಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸಿದ್ದಾರೆ.
ಸೀಜನ್ 5ಕ್ಕೆ ಕೂಡ ಅಭೂತಪೂರ್ವ ಸ್ಪಂದನೆ ದೊರೆತಿದೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆ ನೌಕರರು, ಸಾಫ್ಟ್ವೇರ್ ಉದ್ಯೋಗಿಗಳು ಸೇರಿದಂತೆ ವಿವಿಧ ವಲಯಗಳ ಸಾವಿರಾರು ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷ.
ಈಗಾಗಲೇ ಟೆಸ್ಕೋ, ಇನ್ಫೋಸಿಸ್, ಸಾಸ್ಕೆನ್ ಕಂಪ್ಯೂಟರ್ಸ್ ಮೌಂಟ್ ಕಾರ್ಮೆಲ್ ಮತ್ತು ಸುರಾನ ಕಾಲೇಜುಗಳಲ್ಲಿ ಆಡಿಷನ್ ನಡೆದಿದೆ.
ಜತೆಗೆ ಗರುಡಾ ಮಾಲ್ನಲ್ಲಿ ಸಾರ್ವಜನಿಕರಿಗೆ ಆಡಿಷನ್ ಮಾಡಲಾಗಿದೆ. ವೈವಿಧ್ಯಮಯ ಹಿನ್ನೆಲೆಯಿಂದ ಬಂದ 7000ಕ್ಕೂ ಹೆಚ್ಚು ಕಂಠಸಿರಿಗಳು ಈ ಆಡಿಷನ್ಗಳಲ್ಲಿ ಭಾಗವಹಿಸಿವೆ.
ವಿವಿಧ ಹಂತಗಳಲ್ಲಿ ಸ್ಪರ್ಧಿಸಿ ಕ್ವಾಟರ್ ಫೈನಲ್ಗೆ ಬಂದ ಸ್ಪರ್ಧಿಗಳ ಪೈಕಿ ಡಾ. ನಿತಿನ್, ಗೋವಿಂದ, ಶ್ರೀರಕ್ಷಾ ಮತ್ತು ಸುಚಿತ್ರಾ ಸೆಮಿಫೈನಲ್ಗೆ ಆಯ್ಕೆಯಾದರು. ಇವರು ಸೆಪ್ಟೆಂಬರ್ 24ರಂದು ತಮ್ಮ ಕಂಠಸಿರಿಯನ್ನು ಒರೆಗೆ ಹಚ್ಚಲಿದ್ದಾರೆ.
ಅಂತಿಮವಾಗಿ ಅಕ್ಟೋಬರ್ 9 ರಂದು ನಡೆಯಲಿರುವ ಗ್ರಾಂಡ್ ಫಿನಾಲೆಗೆ ಮೂವರು ಪುರುಷರು ಹಾಗೂ ಮೂವರು ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಫೈನಲ್ನಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಗಾಯಕರು ವಾಯ್ಸ ಆಫ್ ಬೆಂಗಳೂರು ಸೀಜನ್ - 5ರ ವಿಜೇತರಾಗಿ ಆಯ್ಕೆಯಾಗಲಿದ್ದಾರೆ.