ಗಂಗಾವತಿ: ಐದು ತಿಂಗಳಿಂದ ಮಾಸಾಶನ ದೊರೆಯದ ಕಾರಣ ನಗರ ಸೇರಿದಂತೆ ತಾಲ್ಲೂಕಿನ ಸಾವಿರಾರು ಮಂದಿ ಮಾಸಾಶನ ಫಲಾನುಭವಿಗಳು ನಿತ್ಯವೂ ಇಲ್ಲಿನ ಖಜಾನೆ ಇಲಾಖೆಯ ಬಾಗಿಲು ತಟ್ಟುವಂತಾಗಿದೆ.
ತಾಲ್ಲೂಕಿನ ಫಲಾನುಭವಿಗಳಿಗೆ 2010ರ ಅಕ್ಟೋಬರ್ನಿಂದ ಫೆಬ್ರವರಿವರೆಗೆ ಅಂದರೆ ಒಟ್ಟು ಐದು ತಿಂಗಳಿಂದ ಮಾಸಾಶನ ಸಿಕ್ಕಿಲ್ಲ. ಇಂದು-ನಾಳೆ ಹಣ ದೊರೆಯಬಹುದೆಂಬ ಲೆಕ್ಕಾಚಾರದಲ್ಲಿ ಫಲಾನುಭವಿಗಳು ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ರೂ, 200 ಇದ್ದ ಮಾಸಾಶನ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ 400 ರೂಪಾಯಿಗೆ ಏರಿಸಿದೆ. ಸರ್ಕಾರ ನೀಡುವ ಮಾಸಾಶನದಿಂದ ದುಡಿಯಲು ಅಶಕ್ತರಾದ ವೃದ್ಧರ ಔಷಧಿ, ಊಟೋಪಚಾರ ಮೊದಲಾದ ಕಾರ್ಯಗಳಿಗೆ ಉಪಯುಕ್ತವಾಗುತಿತ್ತಲ್ಲದೆ, ವೃದ್ಧರು ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗಿತ್ತು. ಐದು ತಿಂಗಳಿಂದ ಹಣ ಬಿಡುಗಡೆಯಾಗದೆ ಅಶಕ್ತ ವೃದ್ಧರು ಕಂಗಾಲಾಗಿದ್ದಾರೆ ಎಂದು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.
ಮುರಾರಿ ಕ್ಯಾಂಪ್, ಮಹೆಬೂಬನಗರ, ಭಗತ್ ಸಿಂಗ್ನಗರ ಸೇರಿದಂತೆ ವಿವಿಧ ವಾರ್ಡುಗಳ ನೂರಾರು ಮಂದಿಗೆ ನಿತ್ಯ ಕಚೇರಿ ಅಲೆದಾಟವೇ ಕಾಯಕವಾಗಿದೆ.