ಚಿತ್ರದುರ್ಗ: ಸಾರ್ವಜನಿಕರು ಪ್ರತಿ ನಿತ್ಯ ನೀರಿನ ಮಿತ ಬಳಕೆ ಮೂಲಕ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತೊಂದರೆ ಈಗಿನಿಂದಲೇ ನಿವಾರಣೆ ಮಾಡಲು ಎಲ್ಲರೂ ಗಮನಹರಿಸಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಭಿಪ್ರಾಯಪಟ್ಟರು.
ನಗರದ ಕ್ರೀಡಾ ಸಭಾಂಗಣದಲ್ಲಿ ಸೋಮವಾರ ನೀರಿನ ಹಕ್ಕಿಗಾಗಿ ಜನಾಂದೋಲನದ ಅಡಿಯಲ್ಲಿ ಕುಡಿಯುವ ನೀರಿನ ಖಾಸಗೀಕರಣ ವಿರೋಧಿಸಿ ಹಮ್ಮಿಕೊಂಡಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ನೈಸರ್ಗಿಕವಾಗಿ ದೊರೆಯುವಂಥ ಹಲವು ರೀತಿಯ ಖನಿಜಗಳಿವೆ ಅವುಗಳಲ್ಲಿ ನೀರು ಸಹ ಒಂದು. ಹಿರಿಯರು ಕೆರೆಗಳನ್ನು ನಿರ್ಮಾಣ ಮಾಡಿದ್ದರಿಂದ ಇಂದು ನಾವು ನೀರನ್ನು ಬಳಕೆ ಮಾಡುತ್ತಿದ್ದೇವೆ. ನೀರನ್ನು ಸರಿಯಾದ ರೀತಿ ಬಳಕೆ ಮಾಡಿದಿದ್ದರೆ ಮುಂದಿನ ದಿನಗಳಲ್ಲಿ ನೀರಿಗೆ ಮದ್ಯದ ಬೆಲೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೀರಿಗಾಗಿ ಜನಾಂದೋಲನದ ರಾಜ್ಯ ಸಂಘಟನೆಯ ಸಂಚಾಲಕ ಎಂ.ಆರ್. ಪ್ರಭಾಕರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುಡಿಯುವ ನೀರಿನ ಯೋಜನೆಗಳನ್ನು ಖಾಸಗೀಕರಣಗೊಳಿಸಿ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವ ಹಕ್ಕು ನೀಡಿ ದೇಶ ಮತ್ತು ರಾಜ್ಯದ ನೀರು ಹಂಚಿಕೆ ಜವಾಬ್ದಾರಿ ಯನ್ನು ವಿದೇಶಿ ಕಂಪೆನಿಗಳಿಗೆ ನೀಡುವ ಮೂಲಕ ಹುನ್ನಾರಗಳನ್ನು ನಡೆಸುತ್ತಿವೆ. ಆದ್ದರಿಂದ ಅದನ್ನು ಬಯಲುಗೊ ಳಿಸುವಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ಹಾಗೂ ಸಾರ್ವಜನಿಕರು ಮುಂದಾಗಬೇಕಿದೆ ಎಂದು ತಿಳಿಸಿದರು.
ನೀರಿನ ಮೂಲಗಳು ಭಾರಿ ಪ್ರಮಾಣದಲ್ಲಿ ವಿನಾಶಗೊಳ್ಳುತ್ತಿದೆ. ಕೆರೆ, ನದಿ, ಕೊಳ, ಕಾಲುವೆ ಸೇರಿದಂತೆ ಭೂಗರ್ಭ ಜಲವನ್ನು ಸಂಪೂರ್ಣ ನಾಶ ಮಾಡಲಾಗುತ್ತಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ಶುದ್ದ ನೀರು, ಸಮುದ್ರ, ಕಾಡು, ಬೆಟ್ಟ-ಗುಡ್ಡ ಪ್ರಕೃತಿಯಿಂದ ನಿರ್ಮಿತವಾದುದು, ಇದಕ್ಕೆ ನಾವೆಲ್ಲರೂ ಸ್ವತಂತ್ರರು. ಇದಕ್ಕಾಗಿ ಅನೇಕ ಹೋರಾಟಗಳು ಸಹ ನಡೆಯುತ್ತಿವೆ. ನೀರಿನ ನ್ಯಾಯಕ್ಕಾಗಿ ರಾಜ್ಯ ಸರ್ಕಾರಕ್ಕೆ ನೀಡಿದ ಬೇಡಿಕೆಗಳಿಗೆ ಹಾಗೂ ಮನವಿಗಳಿಗೆ ಕಿವಿಗೊಡದ ಸ್ಥಿತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ನೀರಿನ ಹಕ್ಕಿಗಾಗಿ ಜನಾಂದೋಲನ ಹಮ್ಮಿಕೊಳ್ಳಬೇಕಿದೆ ಎಂದು ತಿಳಿಸಿದರು.
ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಎಂ.ಎಸ್. ರಾಜು, ಅರುಳ್ ಸೆಲ್ವ್ ಎಸ್ತರ್, ಸುನಂದಾ, ಫಾಸ್ಟರ್ ಅಲೆಗ್ಸಾಂಡರ್ ಹಾಜರಿದ್ದರು. ಸಂಘಟನೆ ಮುಖಂಡ ನರೇನಹಳ್ಳಿ ಅರುಣ್ಕುಮಾರ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.