ನವದೆಹಲಿ, (ಪಿಟಿಐ): ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಹೊಸ ವರದಿ ತಿಳಿಸಿದೆ.ಆದರೆ ಇದರಿಂದ ಕಳವಳಗೊಳ್ಳಬೇಕಾದ ಅಗತ್ಯವಿಲ್ಲ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪವನ್ ಕುಮಾರ್ ಬನ್ಸಾಲ್ ವರದಿಗಾರರಿಗೆ ತಿಳಿಸಿದರು.
ಸಾಮಾನ್ಯವಾಗಿ ಜೂನ್ 1ರಂದು ಪ್ರವೇಶಿಸುವ ನೈರುತ್ಯ ಮುಂಗಾರು ಈ ವರ್ಷ ಮೂರು ದಿನ ಮುಂಚಿತವಾಗಿ ಮೇ 29ರಂದು ಕೇರಳವನ್ನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಪರಿಷ್ಕೃತ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.
ಈ ಬಾರಿ ಮುಂಗಾರು ಸಾಧಾರಣವಾಗಿರುತ್ತದೆಯಲ್ಲದೆ ದೀರ್ಘ ಅವಧಿಯ ಸರಾಸರಿ (ಎಲ್ಪಿಎ)ಯ ಶೇ 98ರಷ್ಟು ಮಳೆ ಸುರಿಯಲಿದೆ ಎಂದು ಏಪ್ರಿಲ್ನಲ್ಲಿ ಹೊರಬಂದ ಹವಾಮಾನ ವರದಿಯಲ್ಲಿ ತಿಳಿಸಲಾಗಿತ್ತು.
ಆದರೆ ಮುಂಗಾರು ಕ್ಷೀಣಿಸುವುದರಿಂದ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂಬ ಭೀತಿಯನ್ನು ಬನ್ಸಾಲ್ ಅಲ್ಲಗಳೆದಿದ್ದಾರೆ. ಇದುವರೆಗೂ ರಾಷ್ಟ್ರದೆಲ್ಲೆಡೆ ಮುಂಗಾರು ಒಂದೇ ರೀತಿಯಲ್ಲಿಯೇ ಸುರಿದಿದ್ದು ಕಳವಳಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.