ನರಗುಂದ: ನವಿಲುತೀರ್ಥ ಜಲಾಶಯ ತುಂಬಿದ ಪರಿಣಾಮ ಶನಿವಾರವೂ ಮಲಪ್ರಭೆ ಪ್ರವಾಹ ಮುಂದುವರಿದಿದ್ದು ಕೊಣ್ಣೂರು ಬಳಿಯ ದೊಡ್ಡ ಹಾಗೂ ಕಿರು ಸೇತುವೆ ಮೇಲೆ ನದಿ ನೀರು ತುಂಬಿ ಹರಿಯುತ್ತಿದೆ. ಇದರಿಂದಾಗಿ ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಜನಜಿವನ ಅಸ್ತವ್ಯಸ್ತ ಗೊಂಡಿದೆ. ವಾಹನಗಳು ಮಾರ್ಗ ಬದಲಿಸಿ ವಿಜಾಪುರ ಕಡೆಗೆ ಪ್ರಯಾಣ ಬೆಳೆಸಬೇಕಾಗಿದೆ.
ಶನಿವಾರ ತಾಲ್ಲೂಕಿನ ಬೂದಿಹಾಳ ಗ್ರಾಮದ ಸುತ್ತಲೂ ನೀರು ಆವರಿಸಿದ್ದು ಕೊಣ್ಣೂರು ಕ್ರಾಸ್ನಿಂದ ಬೂದಿಹಾಳ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂರು ಕಿರು ಸೇತುವೆಗಳ ಮೇಲೆ ನೀರು ಬಂದಿದೆ.
ತಹಸೀಲ್ದಾರ ಎ.ಎಚ್.ಬದಾಮಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿ ಬಿ.ವಿ.ಪಾಟೀಲ ಅವರು ಗ್ರಾಮಸ್ಥರ ಸಹಾಯದಿಂದ ಆಳವಾದ ನೀರಿನಲ್ಲಿ ನಡೆದುಕೊಂಡೇ ಗ್ರಾಮವನ್ನು ತಲುಪಿದರು.
ಪ್ರವಾಹದ ನೀರಿನಿಂದ ತರಕರಾರಿ ಬೆಳೆಗೆ ಅಪಾರ ಹಾನಿಯಾಗಿದ್ದು, ರೈತರಿಗೆ ಸೂಕ್ತ ಪರಿಹಾರವನ್ನು ದೊರಕಿ ಸಿಕೊಡಬೇಕು ಎಂಬುದಾಗಿ ಗ್ರಾಮ ಸ್ಥರು ಇದೇ ಸಂದರ್ಭದಲ್ಲಿ ತಹಸೀ ಲ್ದಾರ ಅವರನ್ನು ಆಗ್ರಹಿಸಿದರು.
ಹಾನಿಯ ಸಂಬಂಧ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸ ಲಾಗುವುದು ಹಾಗೂ ಗ್ರಾಮಸ್ಥರಿಗೆ ಪರಿಹಾರ ದೊರಕಿಸಿಕೊಡಲು ಪ್ರಸ್ತಾವ ಕಳಿಸಲಾಗುವುದು ಎಂದು ತಹಸೀಲ್ದಾರ ಅವರು ಈ ಸಂದರ್ಭದಲ್ಲಿ ಹೇಳಿದರು.