ಸುಳ್ಯ: ಕಲ್ಲುಗುಂಡಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಐವರು ಮುಖಂಡರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಯಾವುದೇ ಷರತ್ತು ವಿಧಿಸದೇ ಅದನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಕಲ್ಲುಗುಂಡಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಮುಖಂಡ ಶ್ರಿನಿವಾಸ ಉಬರಡ್ಕ, ಹಿಂದೂ ಸಮಾಜಕ್ಕೆ ಇಂದು ದುಸ್ಥಿತಿ ಬಂದಿದೆ. ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಎಲ್ಲ ಹಿಂದೂಗಳೂ ಒಂದಾಗಬೇಕಾಗಿದೆ. ಸಮಾಜೋತ್ಸವದಲ್ಲಿ ಮಾತನಾಡಿದವರ ಮೇಲೆ ಸುಳ್ಳು ಕೇಸು ಹಾಕಿದ್ದು, ಹಿಂದೂಗಳ ಮೇಲೆ ನಿರಂತರ ನಡೆಯುವ ದಬ್ಬಾಳಿಕೆಗೆ ನಿದರ್ಶನವಾಗಿದೆ. ನಿದ್ದೆ ಬಿಟ್ಟು ಹೋರಾಟ ಮಾಡಿ ಹಿಂದೂ ಸಮಾಜ ಕಟ್ಟಲು ಕಟಿಬದ್ಧರಾಗೋಣ ಎಂದರು.
ಯಶೋಧರ ಸಂಪಾಜೆ ಮಾತನಾಡಿ, ಹಿಂದೂ ನಾಯಕರ ಮೇಲೆ ದಾಖಲಾದ ಪ್ರಕರಣವನ್ನು ಯಾವುದೇ ಷರತ್ತು ವಿಧಿಸದೇ ವಾಪಸ್ ಪಡೆಯಬೇಕು ಎಂದರು. ಒಂದು ತಿಂಗಳ ಒಳಗೆ ವಾಪಸು ಪಡೆಯದಿದ್ದರೆ ತಾಲ್ಲೂಕು ಮಟ್ಟದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಮುಖಂಡರಾದ, ನ.ಸೀತಾರಾಮ, ಎಸ್.ಎನ್ಮನ್ಮಥ, ಎನ್.ಎ.ರಾಮಚಂದ್ರ, ಸನತ್ ಅಡ್ಕಾರು, ಕಿಶೋರ್ ಕುಮಾರ್, ಶೇಖರ್ ಮಡ್ತಿಲ, ದಯಾನಂದ ಪಂಜಿಗಾರು, ವಿಜಯ, ಕುಂಞಿಕಣ್ಣ ಕೈಪಡ್ಕ, ಹರೀಶ್ ಕಂಜಿಪಿಲಿ, ಪಿ.ಕೆ.ಉಮೇಶ, ಪ್ರಕಶ್ ಹೆಗ್ಡೆ, ಮತ್ತಿತರರು ಪಾಲ್ಗೊಂಡಿದ್ದರು. ಸಭೆಗೂ ಮೊದಲು ಕೂಲಿಶೆಡ್ಡಿನಿಂದ ಆರಂಭವಾದ ಮೆರವಣಿಗೆ ಒತ್ತೆಕೋಲ ಮೈದಾನದ ಬಳಿ ಸಮಾಪನಗೊಂಡಿತು.