ಲಕ್ಷ್ಮೇಶ್ವರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಖರೀದಿಸಲು ಆಗಮಿಸಿದ್ದಾಗ, ರೈತ ಸಂಪರ್ಕ ಕೇಂದ್ರ ಮುಚ್ಚಿದ್ದನ್ನು ಕಂಡು ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾದ ಘಟನೆ ಸೋಮವಾರ ನಡೆಯಿತು.
ಕೇಂದ್ರಕ್ಕೆ ಕೀಲಿ ಹಾಕಿದ್ದನ್ನು ಖಂಡಿಸಿ ರೈತರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೀಪಕ ಲಮಾಣಿ `ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕೆಲಸ ಬಿಟ್ಟು ಬೀಜ ಖರೀದಿಗಾಗಿ ಆಗಮಿಸಿದರೆ ಉತ್ತರ ನೀಡಲು ಯಾವೊಬ್ಬ ಅಧಿಕಾರಿಯೂ ಇಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದ್ದು, ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳಿಗೆ ರೈತರ ಬಗ್ಗೆ ಕಿಂಚಿತ್ತು ಕಳಕಳಿ ಇಲ್ಲ ಎಂದು ಆರೋಪಿಸಿದರು.
`ಬಿತ್ತನೆ ಸಮಯದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬಾಗಿಲು ಹಾಕಿರುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳು ಹೀಗೆ ಮುಂದುವರಿದರೆ ರೈತ ಸಂಪರ್ಕ ಕೇಂದ್ರದ ಎದುರು ಉಗ್ರ ಹೋರಾಟ ಮಾಡಲಾಗುವುದು~ ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ `ಕಂಠಿಶೇಂಗಾ ಹಾಗೂ ಗೋವಿನಜೋಳ ಬೀಜ ದಾಸ್ತಾನು ಮಾಡಲು ಗೋದಾಮು ಇಲ್ಲ. ಹೆಚ್ಚಿನ ರೈತರು ಈ ಬೀಜಕ್ಕಾಗಿ ಬರುತ್ತಿದ್ದಾರೆ. ಮಂಗಳವಾರ ಗೋದಾಮು ಸಿಗಲಿದ್ದು ಅಲ್ಲಿಯವರೆಗೆ ಕೇಂದ್ರಕ್ಕೆ ಬಾಗಿಲು ಹಾಕಿದ್ದೇವೆ~ ಎಂದು ತಿಳಿಸಿದರು.
ರೈತರಾದ ಭರಮಗೌಡ ಪಾಟೀಲ, ನಿಂಗಪ್ಪ ಬನ್ನಿ, ಗಿರಯಪ್ಪಗೌಡ ಪಾಟೀಲ, ಷಣ್ಮುಖಪ್ಪ ತೆಗ್ಗಳ್ಳಿ, ಗೋವನಾಳ ಗ್ರಾಮದ ನಿಂಗಪ್ಪ ಹುಬ್ಬಳ್ಳಿ, ಇಸಾರ್ ಅಹಮ್ಮದ್ ರಿತ್ತಿ, ಪರಸಾಪುರದ ದೇವಪ್ಪ ಜೋಗಿ, ನೀಲಪ್ಪ ಬಿಚಗತ್ತಿ, ಎಲ್.ವಿ. ಪಾಟೀಲ, ಮುಕ್ತಾರ್ಅಹಮ್ಮದ್ ಗದಗ, ನೂರ್ಅಹಮ್ಮದ್ ಹುಲಗೂರ ಸೇರಿದಂತೆ ಮತ್ತಿತರ ರೈತರು ಹಾಜರಿದ್ದರು.