ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಮರಳು ಸಾಗಣೆ ಲಾರಿ ತಡೆ

Last Updated 18 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ಮೂಡಿಗೆರೆ:  ಕಡೂರು-ಮಂಗಳೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಲಾರಿ ಮೂಲಕ ಮರಳು ಅಕ್ರಮ ಸಾಗಣೆಯನ್ನು ಶಾಸಕ ಕುಮಾರಸ್ವಾಮಿ ತಡೆ ಹಿಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಶಾಸಕ ಕುಮಾರಸ್ವಾಮಿ ಮೂಡಿಗೆರೆ ತಾಲ್ಲೂಕಿನ ಹೇಮಾವತಿ ನದಿಯಿಂದ ರಾತ್ರಿ ಸಮಯದಲ್ಲಿ ಅವ್ಯಾಹತವಾಗಿ ಲಾರಿಗಳಲ್ಲಿ ಮರಳು ಸಾಗಣೆಯಾಗುತ್ತಿರುವುದನ್ನು ಕಂಡರು. ತಕ್ಷಣಲೋಕೋಪಯೋಗಿ ಇಲಾಖೆ ಅಧಿಕಾರಿಗೆ ತಪಾಸಣೆ ಮಾಡಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಸುಮಾರು 18 ಲಾರಿಗಳನ್ನು ವಶಕ್ಕೆ ಪಡೆಯಿತು.

ರಾಜ್ಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಲಾರಿಗಳು ರಾತ್ರಿ ಸಾಗುತ್ತಿರುವುದನ್ನು ಕಂಡ ಶಾಸಕರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಖುದ್ದಾಗಿ ರಸ್ತೆಯಲ್ಲಿ ನಿಂತು ಅಡ್ಡಗಟ್ಟಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಬಳಿಕ ಮಿಂಚಿನ ಕಾರ್ಯಾಚರಣೆ ನಡೆಸಿದ ಪಿಡಬ್ಲೂಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣ ಮಲ್ಯ ನೇತೃತ್ವದ ತಂಡ ಅಂಗಡಿ ಮತ್ತು ಜೇನುಬೈಲು ಪ್ರದೇಶಕ್ಕೆ ದಾಳಿ ನಡೆಸಿ ಪರವಾನಗಿ ರಹಿತವಾಗಿ ಅಕ್ರಮವಾಗಿ ತುಂಬಿಸಿದ್ದ 18 ಲಾರಿಗಳನ್ನು ವಶಕ್ಕೆ ಪಡೆದರು.  ಈ ಕುರಿತು ಶಾಸಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾ ನಾಡಿ, ಮರಳು ಟೆಂಡರ್ ಪ್ರಕ್ರಿಯೆಗಳು ನಿಯಮ ಬದ್ಧವಾಗಿ ನಡೆದಿಲ್ಲ. ಮರಳು ಗಣಿಗಾರಿಕೆಯನ್ನು ಎಲ್ಲಾ ಪ್ರದೇಶಗಳಲ್ಲಿ ಏಕ ಕಾಲದಲ್ಲಿ ನಡೆಸುವುದನ್ನು ತಕ್ಷಣ ಸ್ಥಗಿತಗೊಳಿಸಬೇಕಾಗಿದೆ.

ಒಂದೊಂದು ಪ್ರದೇಶವನ್ನು ಗಣಿಗಾರಿಕೆಗೆ ಅವಕಾಶವನ್ನು ನೀಡಿ ಮರಳು ಖಾಲಿಯಾದ ಬಳಿಕ ಮತ್ತೊಂದು ಪ್ರದೇಶದಲ್ಲಿ ಅನುಮತಿ ನೀಡಬೇಕು. ಹಾಗಾದರೆ ಜಿಲ್ಲೆಯಾದ್ಯಂತ ಇರುವ ಮರಳಿನ ಕೃತಕ ಆಭಾವವನ್ನು ತಪ್ಪಿಸಬಹುದಾಗಿದೆ. ರಾತ್ರಿ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಸ್ಥಳವನ್ನು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಮರಳುಗಾರಿಕೆಗೆ ಸ್ಥಗಿತಕ್ಕೆ  ಒತ್ತಾಯ
ಮೂಡಿಗೆರೆ ತಾಲ್ಲೂಕಿನ ರಾಮೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕಣಚೂರು ಬ್ಲಾಕ್‌ನ ಕೆಸವಳಲು ಕೂಡಿಗೆ ಬಳಿ ಹೇಮಾವತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕೆಸವಳಲು ಗ್ರಾಮಸ್ಥರು ಪಿಡಬ್ಲೂಡಿ ಇಲಾಖೆ ಎಇಇಗೆ ಮನವಿ ಸಲ್ಲಿಸಿದ್ದಾರೆ.

ಕೆಸವಳಲು ಗ್ರಾಮದ ಪರಿಶಿಷ್ಠ ಕಾಲೊನಿ ಜನರು ಕಳೆದ ಅನೇಕ ವರ್ಷಗಳಿಂದ ಹೇಮಾವತಿ ನದಿಯ ಈ ಪ್ರದೇಶವನ್ನು ದೃಷ್ಟಿ ತೆಗೆಯುವ ಸ್ಥಳವಾಗಿ, ಪೂಜಾ ಸ್ಥಳವಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿಗೆ ರಾಜ್ಯದ ಮೂಲೆ, ಮೂಲೆಯ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸು ತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮರಳುಗಾರಿಕೆಗೆ ಪರವಾನಗಿ ನೀಡುತ್ತಿರುವುದರಿಂದ ಹೇಮಾವತಿ ನದಿಯಲ್ಲಿ ಆಳ ಕಂದರಗಳು ನಿರ್ಮಾಣವಾಗುತ್ತಿದ್ದು ಭಕ್ತಾದಿಗಳಿಗೆ ಅಪಾಯ ಕಾರಿಯಾಗಿ ಪರಿಣಮಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

 ಇದೇ ಸ್ಥಳದಲ್ಲಿ ಅನೇಕ ಜನರು ನದಿಯ ಆಳದ ಅರಿವಿಲ್ಲದೇ ನೀರಿಗಿಳಿದು ಪ್ರಾಣ ಕಳೆದುಕೊಂ ಡಿದ್ದಾರೆ. ಆದ್ದರಿಂದ ಮರಳು ಗಾರಿಕೆಗೆ ನೀಡಿರುವ ಅನುಮತಿಯನ್ನು ಹಿಂಪಡೆ ಯಬೇಕು ಎಂದು ಗ್ರಾಮಸ್ಥರಾದ ಮಹೇಶ್, ಗೋಪಾಲ್, ಪುಟ್ಟಸ್ವಾಮಿ, ಕೆ.ಬಿ.ರಾಮಯ್ಯ ಸಿದ್ದೇಶ್, ಬಾಸಯ್ಯ ಅಣ್ಣಪ್ಪ ಸಹಿತ ಐವತ್ತಕ್ಕೂ ಅಧಿಕ ಸಹಿ ಹಾಕಿದ ಮನವಿಯನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT