ನವದೆಹಲಿ (ಪಿಟಿಐ): ಇನ್ನಷ್ಟೇ ಪ್ರಕಟಗೊಳ್ಳಬೇಕಿರುವ ಜೂನ್ ತಿಂಗಳ ಹಣದುಬ್ಬರ ಅಂಕಿ-ಅಂಶ, ಪ್ರಮುಖ ಕಂಪೆನಿಗಳ ತ್ರೈಮಾಸಿಕ ಲೆಕ್ಕಪತ್ರ ಪ್ರಕಟಣೆ ಮತ್ತು ಮುಂಗಾರು ಮಳೆ ಆಧರಿಸಿ ಈ ವಾರದ ಮುಂಬೈ ಷೇರು ಪೇಟೆ ವಹಿವಾಟು ನಿರ್ಧಾರವಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೇಲಿನ `ಮೂರು ಅಂಶ~ದಲ್ಲಿ ಒಂದಂಶ ವ್ಯತ್ಯಾಸವಾದರೂ ವಹಿವಾಟು ಏರಿಳಿತವಾಗಬಹುದು. ಮುಖ್ಯವಾಗಿ ಸೋಮವಾರ ಜೂನ್ನ ಹಣದುಬ್ಬರ ಅಂಕಿ-ಅಂಶ ಪ್ರಕಟಗೊಳ್ಳಲಿದೆ. ಇದನ್ನು ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಇದೇ 31ರಂದು ಪ್ರಕಟಿಸಲಿರುವ ಮೊದಲ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿದರ ತಗ್ಗಿಸಬೇಕೇ-ಬೇಡವೇ ಎನ್ನುವ ನಿರ್ಧಾರ ಕೈಗೊಳ್ಳಲಿದೆ. ಹಾಗಾಗಿ ಇದು ಅತ್ಯಂತ ಮಹತ್ವದ ವಿಚಾರ ಎಂಬುದು `ಸಿಎನ್ಐ~ ಷೇರು ದಲ್ಲಾಳಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಓಸ್ವಾಲ್ ಅವರ ಅಭಿಪ್ರಾಯ.
ಜತೆಗೆ, ಆಕ್ಸಿಸ್ ಬ್ಯಾಂಕ್(ಜುಲೈ 17) ಬಜಾಜ್ ಆಟೊ (ಜುಲೈ 18) ಕೋಟಕ್ ಮಹೀಂದ್ರಾ ಬ್ಯಾಂಕ್, ಹೀರೊ ಮೋಟೊ ಕಾರ್ಪ್, ಡಾ. ರೆಡ್ಡೀಸ್ ಲ್ಯಾಬ್ ಜುಲೈ 19ರಂದು ಮತ್ತು `ಆರ್ಐಎಲ್~ ಜುಲೈ 20ರಂದು ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟಿಸಲಿವೆ. ಮಾರುಕಟ್ಟೆ ಕುಸಿದಿರುವ ಸದ್ಯದ ಪರಿಸ್ಥಿತಿಯಲ್ಲಿ ಈ ಅಂಶಗಳು ವಹಿವಾಟಿನ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.
ಹಣದುಬ್ಬರ ಮತ್ತು ತ್ರೈಮಾಸಿಕ ಫಲಿತಾಂಶ ಹೊರತುಪಡಿಸಿದರೆ ಈ ವಾರ `ರಾಷ್ಟ್ರಪತಿ ಚುನಾವಣೆ~ ಕೂಡ ಷೇರುಪೇಟೆ ಮೇಲೆ ಪರಿಣಾಮ ಬೀರಬಹುದು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ `ಆರ್ಥಿಕ ಸುಧಾರಣೆಗೆ~ ಮುಂದಾಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
`ಈ ವಾರ ರಾಷ್ಟೀಯ ಷೇರು ಸೂಚ್ಯಂಕ `ನಿಫ್ಟಿ~ 5,040ರಿಂದ 5,270 ಅಂಶಗಳ ನಡುವೆ ಏರಿಳಿತ ಕಾಣಬಹುದು. ವಿವಾದಿತ `ತೆರಿಗೆ ತಪ್ಪಿಸುವ ಪ್ರವೃತಿ ತಡೆ ಸಾಮಾನ್ಯ ನಿಯಮಕ್ಕೆ (ಜಿಎಎಆರ್) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿ ಪರಿಶೀಲಿಸಲಿದೆ. ಈ ನಿಟ್ಟಿನಲ್ಲಿ ಅಲ್ಲಿಯವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) `ಕಾದು ನೋಡುವ ತಂತ್ರ~ ಅನುಸರಿಸುವ ಸಾಧ್ಯತೆ ಇದೆ~ ಎಂದು `ಬೊನಾಂಜ ಪೋರ್ಟ್ ಪೊಲಿಯೊ~ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಂದಾಜು ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.