ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪೊಲೀಸ್ ಠಾಣೆಗಳ `ಮುದ್ದಿನ ಗ್ರಾಮ'

Last Updated 6 ಜುಲೈ 2013, 9:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಗಡಿಯಲ್ಲಿರುವ ನಂದಿ ಹೋಬಳಿಯ ಬೀಡಗಾನಹಳ್ಳಿ ಒಂದರ್ಥದಲ್ಲಿ ಮೂರು ಪೊಲೀಸ್ ಠಾಣೆಗಳ ಮುದ್ದಿನ ಗ್ರಾಮ. ಇಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಅಥವಾ ದುರ್ಘಟನೆ ನಡೆದರೂ ಒಮ್ಮೆಲೇ ಮೂರು ಕಡೆಯಿಂದ ಪೊಲೀಸರು ಧಾವಿಸುತ್ತಾರೆ. ಘಟನೆ ನಡೆದಿರುವ ಸ್ಥಳದ ಬಳಿ ನಿಂತು ಇದು ತಮ್ಮ ಠಾಣೆ ವ್ಯಾಪ್ತಿಗೆ ಬರುವುದೇ ಅಥವಾ ಇಲ್ಲವೇ, ಪ್ರಕರಣ ಏನೂಂತ ದಾಖಲಿಸಬೇಕು ಎಂದೆಲ್ಲ ಸುದೀರ್ಘವಾಗಿ ಚರ್ಚಿಸುತ್ತಾರೆ.

ಇದು ಯಾವಾಗ ತಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಖಚಿತವಾಗುವುದೋ, ಆಗ ಕೊಂಚ ಸಮಾಧಾನಗೊಳ್ಳುತ್ತಾರೆ. ನೆರೆದವರಿಗೆ ಅಲ್ಲಿ-ಇಲ್ಲಿ ಎಂದು ಕೈ ತೋರಿಸಿ ಹೊರಟು ಬಿಡುತ್ತಾರೆ. ಅಷ್ಟು ಹೊತ್ತಿಗೆ ದುರ್ಘಟನೆಯಲ್ಲಿ ನೊಂದವರಿಗೆ ಬದುಕಿನ ನರಕ ದರ್ಶನವಾಗುತ್ತದೆ.

ಪೊಲೀಸರ ಈ ರೀತಿಯ ತನಿಖೆ ಪ್ರಕ್ರಿಯೆ ಇತ್ತೀಚಿನದ್ದಲ್ಲ, ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಬೀಡಗಾನಹಳ್ಳಿಯು ಆಡಳಿತಾತ್ಮಕವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಒಳಪಟ್ಟರೂ ಅಪರಾಧ ಪ್ರಕರಣಗಳು ಮತ್ತು ಇನ್ನಿತರ ಕಾರಣಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಮತ್ತು ದೇವನಹಳ್ಳಿಯೊಂದಿಗೂ ಸಂಬಂಧ ಬೆಸೆದುಕೊಂಡಿದೆ.

ಜಿಲ್ಲೆಯ ಗಡಿಯಂಚಿನಲ್ಲಿರುವ ಕಾರಣ ಗ್ರಾಮದ ಸುತ್ತಮುತ್ತ ಯಾವುದೇ ಅಪಘಾತ ಅಥವಾ ಅಹಿತರ ಘಟನೆ ಜರುಗಿದರೂ ಗ್ರಾಮಸ್ಥರು ತಕ್ಷಣವೇ ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ವಿಜಯಪುರ ಮೂರು ಪೊಲೀಸ್ ಠಾಣೆಗೆ ದೂರವಾಣಿ ಕರೆಗಳನ್ನು ಮಾಡುತ್ತಾರೆ. ಮೂರು ಕಡೆಯಿಂದಲೂ ಪೊಲೀಸರು ಬಂದು ಸ್ಥಳ ಪರಿಶೀಲಿಸುವವರೆಗೆ ಪ್ರಕರಣವು ಯಾರ ವ್ಯಾಪ್ತಿಗೆ ಒಳಪಡುತ್ತದೆ ಎಂಬುದು ಸ್ಪಷ್ಟವಾಗುವುದಿಲ್ಲ.

ಗ್ರಾಮದ ವ್ಯಾಪ್ತಿಯಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಲೋಕ್‌ರಂಜನ್ ಆತ್ಮಹತ್ಯೆ ಪ್ರಕರಣದಲ್ಲೂ ಮೂರೂ ಠಾಣೆಗಳ ಪೊಲೀಸರು ತನಿಖೆ ನಡೆಸಿದ್ದರು. ಗ್ರಾಮದ ಮೇಲ್ಸೇತುವೆ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಟೆ ನಡೆದಾಗಲೂ ಮೂರು ಠಾಣೆಗಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

`ನಮ್ಮ ಗ್ರಾಮವು ಮುದುಗುರ್ಕಿ ಮತ್ತು ಹುರುಳುಗುರ್ಕಿ ಗೇಟ್‌ನಲ್ಲಿದ್ದು, ಎರಡು ಜಿಲ್ಲೆ, ಎರಡು ತಾಲ್ಲೂಕು ಮತ್ತು ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಹಂಚಿಕೆಯಾಗಿರುವುದೇ ವಿಶೇಷ. ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳು ಅಲ್ಲದೇ ವಿಜಯಪುರ ಹೋಬಳಿಯೂ ಸಮಾನ ದೂರದಲ್ಲಿದೆ. ಏನೇ ದೂರುಗಳಿದ್ದರೂ ಅಥವಾ ಸಮಸ್ಯೆಗಳಿದ್ದರೂ ನಾವು ಮೂರೂ ಕಡೆಗೆ ಹೋಗುತ್ತೇವೆ' ಎಂದು ಗ್ರಾಮಸ್ಥರು ಹೇಳುತ್ತಾರೆ.

`ನಮ್ಮ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ವಲಸೆ ಕೂಲಿ ಕಾರ್ಮಿಕರು ಇದ್ದಾರೆ. ಗ್ರಾಮದಲ್ಲಿ ವಾಸವಿದ್ದುಕೊಂಡು ಪ್ರತಿ ದಿನ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರ ಸಂಖ್ಯೆಯೂ ದೊಡ್ಡದು. ಬೆಳಿಗ್ಗೆ 5ರಿಂದ 9 ಗಂಟೆಯವರೆಗೆ ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ನಮ್ಮ ಗ್ರಾಮದ ಜನರೇ ಹೆಚ್ಚಿರುತ್ತಾರೆ. ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಉದ್ಯೋಗ ಮಾಡುವವರು, ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರು, ಗಾರೆ ಕಾರ್ಮಿಕರು ಮತ್ತು ಸಣ್ಣಪುಟ್ಟ ಕೆಲಸಗಳು ಮಾಡುವವರೆಲ್ಲ ಬೆಳಿಗ್ಗೇನೆ ಎದ್ದು ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ' ಎಂದು ಗ್ರಾಮದ ನಿವಾಸಿ ಆನಂದ್ `ಪ್ರಜಾವಾಣಿ'ಗೆ ತಿಳಿಸಿದರು.

`ನಮ್ಮ ಗ್ರಾಮಸ್ಥರು ಕೆಲಸ ಹುಡುಕಿಕೊಂಡು ಬೆಂಗಳೂರು ಮತ್ತು ಸುತ್ತಮುತ್ತಲ ಊರುಗಳಿಗೆ ಹೋದರೆ, ಬೇರೆ ರಾಜ್ಯಗಳಿಂದ ಉದ್ಯೋಗ ಅರಿಸಿಕೊಂಡು ಕೆಲವರು ನಮ್ಮ ಗ್ರಾಮಕ್ಕೆ ಬರುತ್ತಾರೆ. ಇಲ್ಲಿಯೇ ಟೆಂಟು, ಶೀಟುಗಳ ವ್ಯವಸ್ಥೆ ಮಾಡಿಕೊಂಡು ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ.

ಸಮೀಪದಲ್ಲಿ ಎಲ್ಲಿಯಾದರೂ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದರೆ, ಕೂಲಿಕಾರ್ಮಿಕರಾಗಿ ದುಡಿಯಲು ಅವರೆಲ್ಲರೂ ಅಲ್ಲಿ ಹೊರಟುಬಿಡುತ್ತಾರೆ. ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಕೂಲಿಕಾರ್ಮಿಕರು ಗ್ರಾಮದ ಹೊರವಲಯದಲ್ಲೇ ಹತ್ತು ವರ್ಷಗಳಿಂದ ವಾಸವಿದ್ದಾರೆ' ಎಂದು ಅವರು ಹೇಳಿದರು.

`ಕೂಲಿಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದೇ ಇಲ್ಲಿ ಗುಡಾರ ಟೆಂಟ್ ಶಾಲೆಯೊಂದನ್ನು ನಡೆಸಲಾಗುತಿತ್ತು. ಕೂಲಿಗೆಲಸಕ್ಕೆ ಹೋಗುವಾಗ ಪೋಷಕರು ತಮ್ಮ ಮಕ್ಕಳನ್ನು ಗುಡಾರ ಶಾಲೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಈಗ ಶಾಲೆ ನಡೆಸಲಾಗುತ್ತಿಲ್ಲ. ಎರಡು-ಮೂರು ತಿಂಗಳಲ್ಲಿ ಗಾರೆ ಕೆಲಸ ಮುಗಿದುಬಿಟ್ಟರೆ, ಪೋಷಕರು ತಮ್ಮ ಮಕ್ಕಳೊಂದಿಗೆ ಮತ್ತೊಂದು ಊರಿಗೆ ಹೊರಟುಬಿಡುತ್ತಾರೆ. ನಮ್ಮ ಗ್ರಾಮವು ಕೂಲಿಕಾರ್ಮಿಕರ ಪಾಲಿಗೆ ಸ್ವರ್ಗ ಎಂಬಂತಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುವವರಿಗೆ ನಮ್ಮ ಗ್ರಾಮ ಒಂದು ರೀತಿಯಲ್ಲಿ ಔಟ್‌ಹೌಸ್ ಇದ್ದಂತೆ' ಎಂದು ಅವರು ಬಣ್ಣಿಸಿದರು.

`ಗ್ರಾಮದ ಹೊರವಲಯದಲ್ಲಿ ಎಂಜಿನಿಯರಿಂಗ್ ಕಾಲೇಜು ಇರುವ ಕಾರಣ ಅಷ್ಟಿಷ್ಟುಆರ್ಥಿಕ ಚಟುವಟಿಕೆ ನಡೆಯುತ್ತದೆ. ದೇಶದ ಮೂಲೆಮೂಲೆಯಿಂದ ಬಂದಿರುವ ವಿದ್ಯಾರ್ಥಿಗಳು ಕಾಲೇಜಿನ ಹಾಸ್ಟೆಲ್‌ಗಳಲ್ಲಿ ವಾಸವಿರುತ್ತಾರೆ. ಕಾಲೇಜು ಬಳಿಯಿರುವ ಅವರು ನಮ್ಮ ಡಬ್ಬಿ ಅಂಗಡಿಗಳಲ್ಲಿ ಚಹಾ-ಕಾಫಿ ಸೇವಿಸುತ್ತಾರೆ. ಕನ್ನಡ ಮತ್ತು ತೆಲುಗು ಕಲಿಯಲು ಬಯಸುತ್ತಾರೆ.

ಬಹುತೇಕ ವಾಹನಗಳು ಮೇಲುಸೇತುವೆ ಮೇಲೆ ಹೋಗುತ್ತವೆ. ಒಂದು ವೇಳೆ ಈ ಕಾಲೇಜು ಕೂಡ ಇರದಿದ್ದರೆ, ನಾವು ಕೂಡ ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಹುಡುಕುಬೇಕಾದಂತಹ ಪರಿಸ್ಥಿತಿ ಬರುತಿತ್ತು' ಎಂದು ಚಹಾ ತಯಾರಿಸುವ ಡಬ್ಬಿ ಅಂಗಡಿಯವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT