ಗಂಗೊಳ್ಳಿ (ಬೈಂದೂರು): ಪಿಯುಸಿಯಲ್ಲಿ ವಿಜ್ಞಾನ ಅಧ್ಯಯನ ಮಾಡುವವರು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಗುರಿ ಹೊಂದಿರುವ ವಿದ್ಯಮಾನ ದೇಶದ ಭವಿಷ್ಯದ ದೃಷ್ಟಿಯಿಂದ ಸರಿ ಎನಿಸದು. ಅದರಿಂದ ವಿಜ್ಞಾನ ಕ್ಷೇತ್ರ ಬರಡಾಗುವ ಅಪಾಯವಿದೆ.
ನೈಜ ಪ್ರತಿಭೆ ಹೊಂದಿರುವವರು ಮೂಲ ವಿಜ್ಞಾನ ಕಲಿಕೆಯನ್ನು ತೊರೆಯಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಆ ನಿಟ್ಟಿನಲ್ಲಿ ವಿಜ್ಞಾನ ಮಾದರಿಗಳ ತಯಾರಿಗೆ ನೀಡುವ ಪ್ರೋತ್ಸಾಹ ಉತ್ತಮ ಹೆಜ್ಜೆ ಎಂದು ಸ್ಥಳೀಯ ವೈದ್ಯ ಡಾ. ಮೋಹನದಾಸ ಪೈ ಹೇಳಿದರು.
ಇಲ್ಲಿನ ಎಸ್ವಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎರಡು ದಿನಗಳ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲರಾದ ಸರಸ್ವತಿ ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಒಟ್ಟು 200 ವಿದ್ಯಾರ್ಥಿಗಳು ರಚಿಸಿದ್ದ ಹಾಗೂ ಸಂಗ್ರಹಿಸಿದ್ದ ಮಾದರಿಗಳಿದ್ದ ಈ ಪ್ರದರ್ಶನವನ್ನು ಇತ್ತೀಚೆಗೆ ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸ್ಮೃತಿಗೆ ಅರ್ಪಿಸಲಾಯಿತು.
ಉಪನ್ಯಾಸಕ ಆರ್. ಎನ್. ರೇವಣ್ಕರ್ ಸ್ವಾಗತಿಸಿದರು. ಮುಖ್ಯಶಿಕ್ಷಕ ವಾಮನದಾಸ ಭಟ್ ವಂದಿಸಿದರು. ಎಚ್. ಸುಜಯೀಂದ್ರ ಹಂದೆ ನಿರೂಪಿಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಎನ್. ಸದಾಶಿವ ನಾಯಕ್ ಇದ್ದರು.