ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಮೆಟ್ರೊ ರೈಲು ಉದ್ಘಾಟನೆಗೆ ಸಜ್ಜಾಗಿದೆ. ಬೆಂಗಳೂರು ನಗರದ ವೈಶಿಷ್ಟ್ಯಕ್ಕೆ ಮತ್ತು ಅದರ ಬೆರಗಿಗೆ ಮತ್ತೊಂದು ಸಾಕ್ಷಿಯಾಗಿದೆ. ಆದರೆ ಮೆಟ್ರೊಗಾಗಿ ಹಲವನ್ನು ಕಳೆದುಕೊಂಡಿದ್ದೇವೆ. ಅಭಿವೃದ್ಧಿಗಾಗಿ ಇವೆಲ್ಲ ಸರ್ವೆಸಾಮಾನ್ಯ ಎಂಬ ಸಮಜಾಯಿಷಿಗಳು ಅಧಿಕಾರಸ್ಥರಿಂದ ಬಂದಿವೆ.
ನೂರಾರು ವರ್ಷಗಳಿಂದಲೂ ಇದ್ದ ಅಂಗಡಿಗಳು, ತಲೆತಲಾಂತರದಿಂದ ವಾಸವಿದ್ದ ವಸತಿ ಕಟ್ಟಡಗಳು, ಸದಾ ಹಸಿರಿನಿಂದ ನಳನಳಿಸುತ್ತಿದ್ದ ಗಿಡಮರಗಳು, ಅಲ್ಲಿ ವಾಸವಿದ್ದ ಪಕ್ಷಿ ಜೀವ ಜಂತುಗಳು ಮೆಟ್ರೊ ರೈಲಿಗೆ ಬಲಿಯಾಗಿವೆ. ಅದಕ್ಕಾಗಿ ಬಂದ ಪರಿಹಾರ ಮೊತ್ತ ಈಗಾಗಲೆ ಬರಿದಾಗಿದೆ. ನೊಂದ ಮನಸ್ಸುಗಳು ಮತ್ತೆ ಚೈತನ್ಯ ಪಡೆಯಲಾರದಷ್ಟು ಕುಸಿದಿವೆ. ಮೆಟ್ರೊ ಕಾಮಗಾರಿ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಜನರ ಬದುಕು ಅಕ್ಷರಶಃ ನರಕವಾಗಿದೆ.
ಮೆಟ್ರೊಗಾಗಿ ಬದುಕನ್ನು ಕಳೆದುಕೊಂಡು ಅನೇಕರು ಬೀದಿಪಾಲಾಗಿದ್ದಾರೆ. ಇಂತಹವರಿಗೆ ಬಿಡಿಎ ಅಥವಾ ಕೆ.ಎಚ್.ಬಿ. ಆದ್ಯತೆ ಮೇಲೆ ನಿವೇಶನ ಅಥವಾ ಮನೆಗಳನ್ನು ನೀಡಬಹುದಲ್ಲವೆ?