ಸಾಗರ: ಇಲ್ಲಿನ ಜನ್ನತ್ ನಗರ ಬಡಾವಣೆಯಲ್ಲಿ ಜೈಭುವನೇಶ್ವರಿ ಯುವಕಸಂಘ ಹಾಗೂ ಶಿವಪ್ಪನಾಯಕ ಬಡಾವಣೆಯಲ್ಲಿ ಶಿವಪ್ಪನಾಯಕ ಯುವಕಸಂಘ ಪ್ರತಿಷ್ಟಾಪಿಸಿದ್ದ ಗಣೇಶನ ವಿಸರ್ಜನಾಪೂರ್ವ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ಶಾಂತಿಯುತವಾಗಿ ನೆರವೇರಿತು.
ಶಿವಪ್ಪನಾಯಕ ಯುವಕಸಂಘದ ಗಣೇಶೋತ್ಸವದ ಮೆರವಣಿಗೆ ಮಧ್ಯಾಹ್ನ 3ಕ್ಕೆ ಆರಂಭಗೊಂಡಿತು. ಡೊಳ್ಳು ಕುಣಿತ, ಕೀಲು ಕುದುರೆ ಮೊದಲಾದ ಜನಪದ ಕಲಾತಂಡಗಳು, ಮಲ್ಲಕಂಬ, ವಾದ್ಯವೃಂದ ಮೆರವಣಿಗೆಗೆ ಮೆರಗು ನೀಡಿತ್ತು.
ಜೈಭುವನೇಶ್ವರಿ ಯುವಕಸಂಘದ ಗಣೇಶನ ವಿಸರ್ಜನಾಪೂರ್ವ ಮೆರವಣಿಗೆ ಸಂಜೆ 5ರ ವೇಳೆಗೆ ಆರಂಭಗೊಂಡಿತು. ಮೆರವಣಿಗೆಯ ಉದ್ದಕ್ಕೂ ಪಟಾಕಿಗಳ, ಸಿಡಿಮದ್ದು ಪ್ರದರ್ಶನವಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಎರಡೂ ಸಂಘಗಳ ಗಣೇಶೋತ್ಸವದ ಮೆರವಣಿಗೆ ಸಾಗುತ್ತಿದ್ದ ಹಾದಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ದೇವರ ದರ್ಶನ ಪಡೆದರು. ಹಲವು ಸಂಘಸಂಸ್ಥೆಗಳ ಪ್ರಮುಖರು ಗಣೇಶನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದರು. ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಅದ್ದೂರಿ ಮೆರವಣಿಗೆ
ಶಿಕಾರಿಪುರ: ಸಮೀಪದ ದೊಡ್ಡಕೇರಿ ಗಿಡ್ಡೇಶ್ವರ ದೇವಸ್ಥಾನದ ಭಾರತೀಯ ತರುಣ ರೈತ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ಅದ್ಧೂರಿಯಾಗಿ ನೆರವೇರಿತು.
ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆ ನಮನ ಸಲ್ಲಿಸಿದರು. ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.