ಹಾವೇರಿ: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ಕಣದಲ್ಲಿರು 98 ಅಭ್ಯರ್ಥಿಗಳಲ್ಲಿ ಶುಕ್ರವಾರ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದು, 94 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಶಿಗ್ಗಾವಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದ ತಲಾ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದಾರೆ.
ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ವಾಪಸ್ಸಾಗಿಲ್ಲ.
ನಾಮಪತ್ರ ವಾಪಸ್ಸು ಪಡೆದವರಲ್ಲಿ ಶಿಗ್ಗಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿರೇಶ ರುದ್ರಗೌಡ ಪಾಟೀಲ, ಬಸವರಾಜ ಚನ್ನಪ್ಪ ಕುಂಬಾರ, ಹಾನಗಲ್ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿ ಖ್ವಾಜಾಮೋದ್ದೀನ್ ಅಣ್ಣಿಗೇರಿ, ಪಕ್ಷೇತರ ಅಭ್ಯರ್ಥಿ ಗುರುಮೂರ್ತಿ ತಟ್ಟಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ.
ನಾಮಪತ್ರ ವಾಪಸ್ಸು ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3ರವರೆಗೆ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ತಿಳಿಸಿದ್ದಾರೆ.