ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಬೀಳುತ್ತಿರುವ ತುಂತುರು ಮಳೆಗೆ ಅನೇಕ ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಿದೆ.
ತಾಲ್ಲೂಕಿನಲ್ಲಿ ಒಟ್ಟು ಮಳೆಯಾಶ್ರಿತ ಪ್ರದೇಶದಲ್ಲಿ ಈ ಬಾರಿ 28 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಪ್ರಮುಖವಾಗಿ ದೇವಸಮುದ್ರ ಹೋಬಳಿಯ ನಾಗಸಮುದ್ರ, ರಾಂಪುರ, ಬಸಾಪುರ, ದೇವಸಮುದ್ರ ಮತ್ತು ಕಸಬಾ ಹೋಬಳಿಯ ಕೋನಸಾಗರ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ರಾಯಾಪುರ, ಸಿದ್ದಯ್ಯನಕೋಟೆ, ಚಿಕ್ಕೋಬನಹಳ್ಳಿ, ಚಿಕ್ಕುಂತಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಿತ್ತನೆ ಆರಂಭವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿದೆ.
ಎರಡೂ ಹೋಬಳಿಗಳಿಂದ ಅಂದಾಜು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ರೈತರು ಶೇಂಗಾ ಜತೆ ಸಜ್ಜೆ ಮತ್ತು ಔಡಲ ಬಿತ್ತನೆಗೆ ಆಸಕ್ತಿ ತೋರುತ್ತಿದ್ದಾರೆ. ಗುರುವಾರ ಒಂದೇ ದಿನ 25 ಕ್ವಿಂಟಲ್ ಸಜ್ಜೆ ಬಿತ್ತನೆಬೀಜ ಖರ್ಚಾಗಿದ್ದು, ಮತ್ತೆ 30 ಕ್ವಿಂಟಲ್ ಸಜ್ಜೆ ಬೀಜ ತರಿಸಲಾಗಿದೆ. ಬಿತ್ತನೆ ಶೇಂಗಾ ಸಹ ರೈತಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.
ಬೀಜೋಪಚಾರ ಕಡ್ಡಾಯ: ಶೇಂಗಾ ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಟ್ರೈಕೋಟರ್ಮ್, ರೈಜೋಬಿಯಂ ಹಾಗೂ ಪಿಎಸ್ಪಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಬೀಜಕ್ಕೆ ಉಪಚಾರ ಮಾಡಿ ಬಿತ್ತನೆ ಮಾಡಬೇಕು.
ಈ ಮೂರು ರಾಸಾಯನಿಕಗಳು ರೈತಸಂಪರ್ಕ ಕೇಂದ್ರ ಮತ್ತು ಗ್ರಾಮ ಮಟ್ಟದ ಕೃಷಿ ಅನುವುಗಾರರ ಬಳಿ ಲಭ್ಯವಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.