ಬಾಳೆಹೊನ್ನೂರು: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಾದಿ ತಪ್ಪಿಸಿದ್ದು ಸಚಿವ ಡಿ.ಎನ್.ಜೀವರಾಜ್' ಎಂದು ವಕೀಲ ಸುಧೀರ್ ಕುಮಾರ್ ಮುರೋಳಿ ಆರೋಪಿಸಿದರು.
ಪಟ್ಟಣದ ಬಸ್ ನಿಲ್ದಾಣ ಸಮೀಪದ ಹಾಲಪ್ಪಗೌಡ ಕಾಂಪ್ಲೆಕ್ಸ್ ಅವರಣದಲ್ಲಿ ಭಾನುವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತ ನಾಡಿದರು.
`ಚಿಕ್ಕಮಗಳೂರು- ಉಡುಪಿ ಸಂಸದರೂ ಆಗಿದ್ದ ಸದಾನಂದಗೌಡ ನಂತರ ಮುಖ್ಯಮಂತ್ರಿಯಾಗಿ ಬರೀ ನಗಾಡಿದ್ದು ಬಿಟ್ಟರೆ ಜಿಲ್ಲೆಗೆ ಮತ್ತೇನೂ ಮಾಡಿಲ್ಲ. ಅವರು ಮನಸ್ಸು ಮಾಡಿದ್ದರೆ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನೆ ಆರಂಭ ಮಾಡಬಹುದಿತ್ತು. ಆದರೆ ದೂರದರ್ಶಿತ್ವದ ಕನಸು ಇಲ್ಲದ ರಾಜಕಾರಣಿಯಿಂದ ಜಿಲ್ಲೆಯ ಅಭಿ ವೃದ್ಧಿ ಕುಂಠಿತವಾಗಿದೆ' ಎಂದು ದೂರಿದರು.
ವ್ಯವಸಾಯ ಸೇವಾ ಕೇಂದ್ರಗಳಲ್ಲಿ ನೂತವಾಗಿ ಆಳವಡಿಸಿರುವ ಬಯೊಮೆಟ್ರಿಕ್ ತೂಕದ ಯಂತ್ರದ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕೇವಲ 14700 ರೂಪಾಯಿ ಮಾತ್ರ. ಆದರೆ ಆಹಾರ ಮತ್ತು ನಾಗರಿಕ ಇಲಾಖೆ 44 ಸಾವಿರ ರೂಪಾಯಿ ನೀಡಿ ಸುಮಾರು 2200 ಯಂತ್ರಗಳನ್ನು ಖರೀದಿಸಿದೆ. ಇಷ್ಟೊಂದು ಬೃಹತ್ ದರ ವ್ಯತ್ಯಾಸದ ಹಿಂದಿನ ಮರ್ಮವೇನು ಎಂದು ಅವರು ಜೀವರಾಜ್ಗೆ ಸವಾಲೆಸೆದರು.
ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಸಭೆಗೂ ಮುನ್ನ ಮುಖಂಡ ಕಲ್ಮಕ್ಕಿ ಉಮೇಶ್, ದಯಾನಂದ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಗೊಂಡರು.
ಸಭೆಯಲ್ಲಿ ಎಐಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಬಿ.ಸಿ.ಗೀತಾ, ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್.ಚೆನ್ನಕೇಶವ, ಎಚ್.ಎಂ.ಸತೀಶ್, ಡಾ.ಅಂಶುಮಂತ್, ಸಚಿನ್ ಮೀಗ, ಕಲ್ಮಕ್ಕಿ ಉಮೇಶ್, ಫಿಲೋಮಿನಾ ಪೆರಿಸ್, ನವೀನ್, ಮಹಮ್ಮದ್ ಆದಿಲ್ ಇಫ್ತೆಖಾರ್ ಇದ್ದರು.