ಲಖನೌ (ಐಎಎನ್ಎಸ್): ~ಯುಪಿಎ ಸರ್ಕಾರವು ಜನತಾ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ~ ಎಂಬುದಾಗಿ ಬುಧವಾರ ಇಲ್ಲಿ ಟೀಕಿಸಿದ ಬಿಎಸ್ಪಿ ನಾಯಕಿ ಮಾಯಾವತಿ ಅವರು ಯುಪಿಎ ಸರ್ಕಾರಕ್ಕೆ ಬೆಂಬಲ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಶೀಘ್ರವೇ ನಿರ್ಧರಿಸುವುದಾಗಿ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅನಿಶ್ಚಿತತೆ ಕಾಡುತ್ತಿರುವ ಕಾರಣ 2014ರ ನಿಗದಿತ ಅವಧಿಗಿಂತ ಮೊದಲೇ ಲೋಕಸಭಾ ಚುನಾವಣೆಗಳು ನಡೆಯಬಹುದು ಎಂದೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ನುಡಿದರು.
~ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕತ್ವ ಮತ್ತು ಸಂಸತ್ ಸದಸ್ಯರು ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಕೇಂದ್ರದ ಆಡಳಿತ ಬಗ್ಗೆ ಚರ್ಚಿಸಿದರು ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನನಗೆ ವಹಿಸಿದರು~ ಎಂದು ಮಾಯಾವತಿ ಹೇಳಿದರು. ~ಈ ಕುರಿತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಮತ್ತು ನಿಮಗೆ ತಿಳಿಸಲಾಗುವುದು~ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಬಗ್ಗೆ ಬಿಎಸ್ಪಿಗೆ ಸಮಾಧಾನವಿಲ್ಲ ಎಂಬುದನ್ನು ತೋರಿಸುವ ಹಲವಾರು ಸುಳಿವುಗಳನ್ನು ಮಾಯಾವತಿ ನೀಡಿದರು.
ಕೇಂದ್ರ ಸರ್ಕಾರದ ನೀತಿಗಳು ಧಾರ್ಮಿಕ ಅಲ್ಪಸಂಖ್ಯಾತರು, ~ಬಡವರು, ದಲಿತರು ಮತ್ತು ಇತರ ವರ್ಗಗಳ ಜನರ ಹಿತಾಸಕ್ತಿಗಳಿಗೆ ಧಕ್ಕೆ ಉಂಟು ಮಾಡುತ್ತಿವೆ. ಕೋಮು ಶಕ್ತಿಗಳನ್ನು ದುರ್ಬಲಗೊಳಿಸುವ ಸಲುವಾಗಿ ನಾವು ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿದೆವು. ಆದರೆ ಪ್ರಾರಂಭದಿಂದಲೇ ಕೇಂದ್ರ ಸರ್ಕಾರದ ಧೋರಣೆ ಭ್ರಮನಿರಸನ ಉಂಟು ಮಾಡುತ್ತಲೇ ಬಂದಿದೆ~ ಎಂದು ಮಾಯಾವತಿ ಟೀಕಿಸಿದರು.