ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನತೆಯ ದೇಶಪ್ರೇಮದ ಅಭಿವ್ಯಕ್ತಿ

Last Updated 12 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು  ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು.

‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ.
ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 85 ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು.

ನಿಜ, ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದಾಗ ಭಾರತೀಯರಲ್ಲಿ ಸ್ಫುರಿಸುವ ಸಂಭ್ರಮ ಬೇರೆಯದೇ ಮಾದರಿಯದು, ಇತರ ದೇಶಗಳ ವಿರುದ್ಧ ಗೆಲುವು ಸಾಧಿಸಿದಾಗ ಬಾರದಂಥದ್ದು. ಇದಕ್ಕೆ ಸಾಕಷ್ಟು ಕಾರಣಗಳಿವೆ.

ಎಪ್ಪತರ ದಶಕದ ನಂತರ ಜನಿಸಿದವರೇ ಹೆಚ್ಚಾಗಿರುವ ಭಾರತೀಯರಲ್ಲಿ, ಪಾಕಿಸ್ತಾನವನ್ನು ಹೆಚ್ಚಿನವರು ಅರ್ಥ ಮಾಡಿಕೊಂಡಿರುವುದು ಪತ್ರಿಕೆ, ಪುಸ್ತಕಗಳ ಮೂಲಕ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಭಯೋತ್ಪಾದಕರ ದಾಳಿಗೆ ಅಮಾಯಕರ ಬಲಿ, ಉಗ್ರರಿಗೆ ಪಾಕ್ ನಂಟು ಎಂಬ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರತಿನಿತ್ಯ ಓದುವ ನಮ್ಮಲ್ಲಿ ಪಾಕಿಸ್ತಾನವೆಂಬ ಪುಂಡು ರಾಷ್ಟ್ರದ ಬಗ್ಗೆ ಆಕ್ರೋಶ ಮೂಡುವುದು ಸಹಜ. ಭಾರತದ ವಿಭಜನೆಯ ನಂತರ ತನ್ನ ಪಾಡಿಗೆ ತಾನಿರಲು ಪಾಕಿಸ್ತಾನಕ್ಕೆ ಯಾವ ಅಡಚಣೆಯೂ ಇರಲಿಲ್ಲ. ಒಂದು ಬದಿಯಲ್ಲಿ ಯಾವ ರೀತಿಯಲ್ಲೂ ತನಗೆ ತೊಂದರೆ ನೀಡುವ ಯೋಚನೆಯನ್ನೂ ಮಾಡದ ಭಾರತ, ಇನ್ನೊಂದು ಬದಿಯಲ್ಲಿ ತನ್ನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಆಫ್ಘಾನಿಸ್ತಾನ. ಇದು ಪಾಕಿಸ್ತಾನಕ್ಕೆ ನೆಮ್ಮದಿಯಿಂದಿರಲು ಸಾಕಿತ್ತು.

ಆದರೆ, ವಿನಾಕಾರಣ ಭಾರತದ ಮೇಲೆ ದಂಡೆದ್ದು ಬರುವ ಪಾಕಿಸ್ತಾನದ ರಾಜಕೀಯ ನಾಯಕರ ಮನಃಸ್ಥಿತಿಯೇ ಭಾರತೀಯರಲ್ಲಿ ಆ ದೇಶದ ಮೇಲೆ ಆಕ್ರೋಶ ಹರಳುಗಟ್ಟಲು ಕಾರಣ. 1948, 1965, 1971 ಮತ್ತು 1999ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧಗಳು, ಪ್ರತಿದಿನವೆಂಬಂತೆ ನಡೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಛಾಯಾ ಸಮರ ಆ ದೇಶ ಭಾರತದ ಸಾಂಪ್ರದಾಯಿಕ ಎದುರಾಳಿ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಿವೆ.

ಪಾಕಿಸ್ತಾನದ ಜನಸಾಮಾನ್ಯರಲ್ಲಿ ಲಕ್ಷಾಂತರ ಮಂದಿಗೆ ಭಾರತದೊಂದಿಗೆ ಶಾಂತಿಯಿಂದಿರುವ ಆಸೆಯಿರಬಹುದು. ಆದರೆ, ಅದಕ್ಕೆ ದೊಡ್ಡ ಪ್ರಮಾಣದ ಕ್ರಿಯಾತ್ಮಕ ಅಭಿವ್ಯಕ್ತಿ ಇನ್ನೂ ದೊರೆತಿಲ್ಲ. ಅಲ್ಲಿನ ರಾಜಕೀಯ ನಾಯಕರು ಪೋಷಿಸಿರುವ ದ್ವೇಷದ ಮನಃಸ್ಥಿತಿ ಹಾಗೆಯೇ ಇದೆ.

ಅದೇ ಕಾರಣಕ್ಕೆ, ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟವೆಂದರೆ ಅಭಿಮಾನಿಗಳ ಮನದಲ್ಲಿ ಉನ್ಮಾದ ಸೃಷ್ಟಿಯಾಗುವುದು. ದೇಶಪ್ರೇಮ ಹೆಚ್ಚಿನ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ಮಾತ್ರ ಅಭಿವ್ಯಕ್ತಿಗೊಳ್ಳುವುದು. ಶ್ರೀಲಂಕಾ, ದಕ್ಷಿಣ ಆಫ್ರಿಕ ವಿರುದ್ಧ ಭಾರತ ಗೆದ್ದಾಗ ಈ ಪರಿಯ ಉನ್ಮಾದ ಏಕಿರುವುದಿಲ್ಲ ಎಂಬುದಕ್ಕೂ ಇದೇ ಕಾರಣ - ಆ ದೇಶಗಳು ಭಾರತವನ್ನು ವಿನಾಕಾರಣ ಗೋಳು ಹೊಯ್ದುಕೊಂಡಿಲ್ಲ!

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತೋರಿದ ಕ್ರೀಡಾ ಮನೋಭಾವ ನಿಜಕ್ಕೂ ಅನುಕರಣೀಯ. ಅಂಥ ಮನೋಭಾವವನ್ನು ಭಾರತೀಯರು ಖಂಡಿತ ಸ್ವಾಗತಿಸುತ್ತಾರೆ. ಆದರೆ, ಅವರು ಪಾಕಿಸ್ತಾನಕ್ಕೆ ತೆರಳಿದ ನಂತರ ಭಾರತದ ಕುರಿತು ನೀಡಿದ ಹೇಳಿಕೆಯನ್ನು ಯಾವುದೇ ಸಭ್ಯ ಕ್ರೀಡಾಪ್ರೇಮಿ ವಿರೋಧಿಸುತ್ತಾನೆ ಎಂಬುದನ್ನೂ ಮರೆಯುವಂತಿಲ್ಲ.

ಇದೇನೇ ಇರಲಿ, ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಪಾಕಿಸ್ತಾನ ನಡುವೆ 1999ರ ಫೆಬ್ರವರಿಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅದೇ ಪಂದ್ಯದಲ್ಲೇ ಕನ್ನಡಿಗ ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆದದ್ದು. ಆ ಪಂದ್ಯದಲ್ಲೂ ಪಾಕಿಸ್ತಾನಿ ಆಟಗಾರರು ತೋರಿದ ಕ್ರೀಡಾಮನೋಭಾವ ನಿಜಕ್ಕೂ ಶ್ರೇಷ್ಠ ಮಟ್ಟದ್ದು. ಕುಂಬ್ಳೆ ವಿಶ್ವದಾಖಲೆ ಸೃಷ್ಟಿಸಬಾರದು ಎಂದು ಒಬ್ಬ ಪಾಕಿಸ್ತಾನ ಆಟಗಾರ ರನ್ ಔಟ್ ಆಗಿದ್ದರೆ ಅಥವಾ ಬೇರೆ ಬೌಲರ್‌ಗೆ ವಿಕೆಟ್ ಒಪ್ಪಿಸಿದ್ದರೆ ಕುಂಬ್ಳೆ ಹೆಸರಿನಲ್ಲಿ ಅಂಥ ಮಹತ್ವದ ದಾಖಲೆ ಇರುತ್ತಿರಲಿಲ್ಲ. ಇಂಥ ಅನೇಕ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇವೆ.

ಇಷ್ಟಿದ್ದರೂ ಭಾರತೀಯರು ಪಾಕಿಸ್ತಾನದ ವಿರುದ್ಧ ಆಟ ಆಡುವಾಗ ಮಾತ್ರ ಇತರ ತಂಡಗಳ ನಡುವೆ ಆಡುವಂತೆ ಆಡುವುದಿಲ್ಲ. ಕಾರಣ ಇಲ್ಲಿಯವರೆಗೆ ಭಾರತ ಪಾಕಿಸ್ತಾನದಿಂದ ಅನುಭವಿಸಿರುವುದರಲ್ಲಿ ನೋವೇ ಹೆಚ್ಚು. ಆ ನೋವು ಮಾಯಲಿ, ಪಾಕಿಸ್ತಾನದ ನಾಯಕರು ಭಾರತದೆಡೆಗೆ ತಮ್ಮ ಮನೋಭಾವ ಬದಲಿಸಿಕೊಳ್ಳಲಿ. ಆಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾರಲ್ಲೂ ಯುದ್ಧೋನ್ಮಾದ ಹುಟ್ಟಿಸುವುದಿಲ್ಲ. ‘ದೇಶಪ್ರೇಮ ಎಂಬುದು ಪಾಕಿಸ್ತಾನದ ವಿರುದ್ಧ ಮಾತ್ರ ಪ್ರದರ್ಶಿಸುವಂಥದ್ದಾ’ ಎಂಬ ಪ್ರಶ್ನೆಗಳೂ ಹುಟ್ಟುವುದಿಲ್ಲ.

ಕ್ರಿಕೆಟ್ ಅಲ್ಲದೆ ಹಾಕಿ, ಫುಟ್ಬಾಲ್‌ನಂತಹ ಪಂದ್ಯಗಳು ಏಕೆ ಈ ಪರಿಯ ಭಾವುಕತೆಯನ್ನು ನಮ್ಮಲ್ಲಿ ಸೃಷ್ಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಆ ಯಾವ ಆಟವನ್ನೂ ಭಾರತೀಯರು ಕ್ರಿಕೆಟ್‌ನಷ್ಟು ಗಾಢವಾಗಿ ಪ್ರೀತಿಸಲು ಆರಂಭಿಸಿಲ್ಲ, ಅಷ್ಟೆ.
 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT