ಚಾಮರಾಜನಗರ: `ಯುವಜನರನ್ನು ಅಭಿಯಾನದಡಿ ತೊಡಗಿಸಿಕೊಂಡು ಸ್ವಪರಿವರ್ತನೆ, ಸಮಾಜ ರಕ್ಷಕ ಚಿಂತನೆ ಬೆಳೆಸುವ ಉದ್ದೇಶ ಹೊಂದಲಾಗಿದೆ~ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ವೀಣಾ ಹೇಳಿದರು.
ನಗರದ ಪ್ರಕಾಶ ಭವನದಲ್ಲಿ ಈಚೆಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ, ಇನ್ನರ್ವ್ಹೀಲ್ ಹಾಗೂ ಸಂಜೀವಿನಿ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಯುವ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು. ಭ್ರಷ್ಟಾಚಾರ ಮತ್ತು ಮದ್ಯಪಾನದ ವಿರುದ್ಧ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳಲು ಅರಿವು ಮೂಡಿಸಲಾಗುವುದು ಎಂದರು.
ವಿದ್ಯಾವಿಕಾಸ ಪ್ರಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲ ಶಿವಕುಮಾರ ಮಾತನಾಡಿ, ಯುವಕರು ಒತ್ತಡದಿಂದ ಮುಕ್ತರಾಗಬೇಕು. ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಯುವಶಕ್ತಿ ರಾಷ್ಟ್ರದ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಸಲಹೆ ನೀಡಿದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ, ಮೈಸೂರು ವಿವಿಯ ನಿವೃತ್ತ ರಿಜಿಸ್ಟಾರ್ ಆನಂದಾಚಾರ್, ಮೋಹನ, ಕುಮಾರಿ ಇತರರು ಹಾಜರಿದ್ದರು.