ನಿಸರ್ಗ ಚಿಕಿತ್ಸೆ ಮತ್ತು ಯೋಗದಲ್ಲಿ ಸ್ನಾತಕೋತ್ತರ ಪದವಿ ನೀಡುವ ದೇಶದ ಎರಡನೇ ಕಾಲೇಜು ‘ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್’ ನಗರದ ತುಮಕೂರು ರಸ್ತೆ ಜಿಂದಾಲ್ ಆವರಣದಲ್ಲಿ ಆರಂಭವಾಗಿದೆ.
ಇಲ್ಲಿ ನ್ಯಾಚುರೋಪತಿ ಮತ್ತು ಯೋಗದಲ್ಲಿ ಎಂಡಿ ಪದವಿ ನೀಡಲಾಗುತ್ತದೆ. ಪ್ರಾಯೋಗಿಕ ತರಬೇತಿಯನ್ನು ಜಿಂದಾಲ್ ನೇಚರ್ಕ್ಯೂರ್ ಸಂಸ್ಥೆಯಲ್ಲಿ ನೀಡಲಾಗುತ್ತದೆ.ನೂತನ ಕಾಲೇಜು 128 ಎಕರೆ ವಿಶಾಲ ಪ್ರದೇಶದಲ್ಲಿ ಸ್ಥಾಪನೆಗೊಂಡಿದ್ದು, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಹಾಸ್ಟೆಲ್ ಮತ್ತಿತರ ಸೌಕರ್ಯಗಳಿಂದ ಕೂಡಿದೆ. ಇದರ 360 ಸೀಟುಗಳಲ್ಲಿ ಶೇ 20ನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಉತ್ತರಾಂಚಲದ ಮಾಜಿ ರಾಜ್ಯಪಾಲ ಸುದರ್ಶನ್ ಅಗರ್ವಾಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ವಿವೇಕಾನಂದ ಯೋಗ ಕೇಂದ್ರದ ಡಾ. ಎಚ್.ಆರ್. ನಾಗೇಂದ್ರ, ಆರೋಗ್ಯ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ, ದಾನಿ ಮತ್ತು ಜಿಂದಾಲ್ ಸಮೂಹದ ಅಧ್ಯಕ್ಷ ಡಾ. ಸೀತಾರಾಂ ಜಿಂದಾಲ್ ಮತ್ತಿತರರು ಹಾಜರಿದ್ದರು.