ಬೆಂಗಳೂರು: ಕನ್ನಡ ವೃತ್ತಿ ರಂಗಭೂಮಿಯ ಹೆಸರಾಂತ ನಟಿ ರಂಗನಾಯಕಮ್ಮ ಅವರನ್ನು 2014ನೇ ಸಾಲಿನ ‘ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಹವ್ಯಾಸಿ ರಂಗ ಕಲಾವಿದರಿಗೆ ರಾಜ್ಯ ಸರ್ಕಾರ ಈ ವರ್ಷದಿಂದ ನೀಡುವ ‘ಬಿ.ವಿ.ಕಾರಂತ ಪ್ರಶಸ್ತಿ’ಗೆ ಬೆಳಕು ತಜ್ಞ ವಿ.ರಾಮಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ರಂಗನಟ ಜಿ.ವಿ.ಕೃಷ್ಣ ಅಧ್ಯಕ್ಷತೆಯ ‘ಗುಬ್ಬಿ ವೀರಣ್ಣ ಪ್ರಶಸ್ತಿ’ ಆಯ್ಕೆ ಸಮಿತಿ ಹಾಗೂ ರಂಗಭೂಮಿ ನಿರ್ದೇಶಕ ಟಿ.ಎಸ್.ನಾಗಾಭರಣ ಅಧ್ಯಕ್ಷತೆಯ ‘ಬಿ.ವಿ.ಕಾರಂತ ಪ್ರಶಸ್ತಿ’ ಆಯ್ಕೆ ಸಮಿತಿಯ ಅಂತಿಮ ಸಭೆಗಳು ಗುರುವಾರ ನಡೆದವು. 75 ವರ್ಷ ವಯಸ್ಸಿನ ರಂಗನಾಯಕಮ್ಮ ಅವರು ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ಹೊನ್ನಪ್ಪ ಭಾಗವತರ್, ಶ್ರೀಕಂಠಮೂರ್ತಿ, ಸುಳ್ಳ ದೇಸಾಯಿ, ಮಹಾಂತೇಶ ಶಾಸ್ತ್ರಿ, ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಕಂಪನಿಗಳಲ್ಲಿ 60ಕ್ಕೂ ಹೆಚ್ಚು ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. 80 ವರ್ಷ ವಯಸ್ಸಿನ ರಾಮಮೂರ್ತಿ ಅವರು ದೇಶದ ಪ್ರತಿಷ್ಠಿತ ರಂಗಮಂದಿರಗಳಿಗೆ ಬೆಳಕಿನ ವಿನ್ಯಾಸ ಮಾಡಿಕೊಟ್ಟಿರುವ ಅನುಭವ ಅವರದಾಗಿದೆ.