ಹೊನ್ನಾಳಿ: ಸುವರ್ಣ ಗ್ರಾಮೋದಯ ಯೋಜನೆಯಡಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಶೇ 40ರಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಬಾಕಿ ಇದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಎಸ್.ರಂಗನಾಥ್ ಹೇಳಿದರು. ಅರಕೆರೆ ಗ್ರಾಮದ ಪ್ರಮುಖ ರಸ್ತೆ ಕಾಂಕ್ರೀಟ್ ಕಾಮಗಾರಿಯನ್ನು ಈಚೆಗೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮದ ಮುಖಂಡರೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಸುವರ್ಣ ಗ್ರಾಮೋದಯ ಯೋಜನೆಯಡಿ ಅರಕೆರೆ ಗ್ರಾಮ ಅಭಿವೃದ್ಧಿಗೊಳ್ಳುತ್ತಿದೆ. ಯೋಜನೆಯಡಿ ಒಟ್ಟು ₨ 47,71,000 ಬಿಡುಗಡೆಯಾಗಿದೆ. ಗ್ರಾಮದಲ್ಲಿ ಶೇ 60ರಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಭೂಸೇನಾ ನಿಗಮದ ಎಂಜಿನಿಯರ್ ಹಾಗೂ ಅಧಿಕಾರಿಗಳು ಕಾಮಗಾರಿಯ ಸಮರ್ಪಕ ನಿರ್ವಹಣೆ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಕೆಲವೆಡೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ. ಹೊನ್ನತ್ತೆಮ್ಮ ದೇವಸ್ಥಾನ ಮತ್ತು ನೀರಿನ ಟ್ಯಾಂಕ್ ಸರ್ಕಲ್ ಕಾಮಗಾರಿ ಬಾಕಿ ಇದೆ ಎಂದು ಅವರು ವಿವರಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಅರಕೆರೆ ಗ್ರಾಮ ಪಂಚಾಯ್ತಿ ಸದಸ್ಯರಾದ ಎಸ್.ಎಚ್.ನಾಗರಾಜ್, ಎ.ಉಮೇಶ್, ಡಿ.ಬಸವರಾಜಪ್ಪ, ಎ.ಹಾಲೇಶ್, ಎಚ್.ಜಿ.ಮಹೇಶ್ವರಪ್ಪ, ಕೆ.ಬಸವರಾಜಪ್ಪ, ಜಿ.ಎಂ.ಬಸವರಾಜ್, ಎ.ಬಿ.ರುದ್ರಪ್ಪ, ಜನಾರ್ದನಾಚಾರಿ ಇದ್ದರು.