ಗೌರಿಬಿದನೂರು: ತಾಲ್ಲೂಕಿನ ಮಧುಗಿರಿ ರೈಲ್ವೆ ಗೇಟ್ ಸಮೀಪದ ನ್ಯಾಯಾಲಯಕ್ಕೆ ತೆರಳುವ ರಸ್ತೆಯೂ ಕೆಲವೇ ತಿಂಗಳು ಹಿಂದೆ ದುರಸ್ತಿ ಕಂಡಿತ್ತು. ಆದರೆ ಚರಂಡಿ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ತೋಡಿ ಹಲವು ದಿನಗಳು ಕಳೆದಿವೆ. ಅತ್ತ ಪೂರ್ಣ ಆಗಿಲ್ಲ. ಇತ್ತ ದುರಸ್ತಿ ನಡೆದಿಲ್ಲ. ಇದರಿಂದ ಈಗ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಸಾಧ್ಯವಾಗಿದೆ.
ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನು ತೆಗೆದಿರುವುದರಿಂದ ಈಗ ಚರಂಡಿ ಬಾಯ್ದೆರಿದೆ. ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಹಲವು ಬಾರಿ ದ್ವಿಚಕ್ರವಾಹನ ಸವಾರರು ಬಿದ್ದು ಕಾಲು ಮುರಿದುಕೊಂಡು ಬಿದ್ದಿರುವ ಘಟನೆಗಳು ಜರುಗಿವೆ. ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ದೂರುತ್ತಾರೆ. ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡರೆ ಜನರು ಸಂಚರಿಸಬಹುದು ಎನ್ನುತ್ತಾರೆ ಸ್ಥಳೀಯರು.