ಕೃಷ್ಣರಾಜಪೇಟೆ: ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಬೊಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದಾಗಿ ಸ್ಥಳೀಯ ರೈತರಿಗೆ ಸೇರಿದ ರಾಗಿ ಮತ್ತು ಹುರುಳಿ ಮೆದೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಗ್ರಾಮದ ರೈತರಾದ ಜಯಮ್ಮ, ಪ್ರಕಾಶ್, ನಂಜುಂಡೇಗೌಡ ಮತ್ತು ಶಾರದಮ್ಮ ಎಂಬ ರೈತರಿಗೆ ಸೇರಿದ ಮೆದೆಗಳು ಅಗ್ನಿಗೆ ಆಹುತಿಯಾಗಿವೆ. ಗ್ರಾಮದ ಕೆಲವರು ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಇತರ ಮೆದೆಗಳಿಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆದರೆ ಈ ಬೆಂಕಿ ಅವಘಡದಿಂದ ನಾಲ್ವರು ರೈತರ ಮೆದೆಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಅಪಾರ ನಷ್ಟವುಂಟಾಗಿದೆ. ಗ್ರಾಮದ ಹೊರವಲಯದಲ್ಲಿದ್ದ ಈ ಮೆದೆಗಳಿಗೆ ಬೆಂಕಿ ಬೀಳಲು ಕಾರಣ ಏನೆಂದು ತಿಳಿದುಬಂದಿಲ್ಲ.
ಕೂಡಲೇ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ನೂತನ ಜಿ.ಪಂ ಸದಸ್ಯ ಮಂಜೇಗೌಡ ಮತ್ತು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.