ಬೆಂಗಳೂರು: `ಮುಸ್ಲಿಮರ ಮೀಸಲಾತಿಯನ್ನು ರಾಜಕೀಯ ದಾಳ ಮಾಡಿಕೊಳ್ಳದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಆಧಾರದ ಮೇಲೆ ಅವರಿಗೆ ಸೂಕ್ತ ಮೀಸಲಾತಿ ನೀಡಬೇಕು~ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಹೇಳಿದರು.
ಸಮ- ಸಮಾಜ ವೇದಿಕೆಯು ನಗರದಲ್ಲಿ ಬುಧವಾರ ಏರ್ಪಡಿಸಿದ್ದ `ಮುಸ್ಲಿಮರ ಮೀಸಲಾತಿ ಸ್ವರೂಪ- ರಾಜಕೀಯ ಮೇಲಾಟ~ ವಿಷಯ ಕುರಿತ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರದ ಯುಪಿಎ ಸರ್ಕಾರಕ್ಕೆ ಮುಸ್ಲಿಮರ ಮೇಲೆ ಕಾಳಜಿ ಇದಿದ್ದರೆ, ಹಿಂದಿನ ಅವಧಿಯಲ್ಲೇ (ಯುಪಿಎ- 1) ಮುಸ್ಲಿಮರಿಗೆ ಮೀಸಲಾತಿ ಜಾರಿಗೆ ತರಬಹುದಿತ್ತು. ಆದರೆ ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಘೋಷಣೆ ಮಾಡಿರುವುದರ ಹಿಂದೆ ಸದುದ್ದೇಶ ಇಲ್ಲ. ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರಾಜಕೀಯ ದಾಳವಾಗಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದರು.
ಪ್ರಾಧ್ಯಾಪಕ ಡಾ.ಮುಜಫರ್ ಅಸ್ಸಾದಿ ಮಾತನಾಡಿ, `ಒಂದು ಸಮುದಾಯಕ್ಕೆ ಮೀಸಲಾತಿ ನೀಡುವುದು ಎಂದರೆ ಆ ಸಮುದಾಯದ ಅಭಿವೃದ್ಧಿ ಆಗಿಲ್ಲ ಎಂದರ್ಥ. ಹಾಗಾಗಿ ಅವರಿಗೆ ಮೀಸಲಾತಿ ನೀಡಬೇಕು~ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರಾಜ್ಯ ಮುಸ್ಲಿಮರ ವೇದಿಕೆ ಅಧ್ಯಕ್ಷ ಎ.ಖಾಸಿಂ ಸಾಬ್, ಸಮ- ಸಮಾಜ ವೇದಿಕೆಯ ಸಂಚಾಲಕ ಕೆ.ಆರ್.ಸುಭಾಷ್ ಇತರರು ಉಪಸ್ಥಿತರಿದ್ದರು.