ಮುಂಬೈ/ ನವದೆಹಲಿ (ಪಿಟಿಐ): ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮ್ಮ ಹೆಸರು ಅಥವಾ ಭಾವಚಿತ್ರ ಬಳಸಬಾರದು ಎಂದು ಗಾಂಧಿವಾದಿ ಅಣ್ಣಾ ಹಜಾರೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದಾರೆ.
`ರಾಳೇಗಣಸಿದ್ಧಿಯಲ್ಲಿ ಎರಡು ದಿನಗಳ ಕಾಲ ನಡೆದ ಭ್ರಷ್ಟಾಚಾರ ವಿರೋಧಿ ಜನಾಂದೋಲನ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ~ ಎಂದು ಅವರ ಸಹಾಯಕ ಸುರೇಶ್ ಪಥರೆ ಹೇಳಿದ್ದಾರೆ.
ಲೋಕಾಯುಕ್ತವನ್ನು ಬಲಪಡಿಸಲು ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ತಾವು ಇನ್ನೊಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಸಭೆಯಲ್ಲಿ ಹಜಾರೆ ಎಚ್ಚರಿಕೆ ನೀಡಿದ್ದಾರೆ.
ಅಣ್ಣಾ ತಂಡದ ಟೀಕೆ: ಉದ್ದೇಶಿತ ಲೋಕಪಾಲ್ ಮಸೂದೆಯನ್ನು ಸರ್ಕಾರ ದುರ್ಬಲಗೊಳಿಸಿ `ಖಾಲಿ ಡಬ್ಬ~ವನ್ನಾಗಿ ಮಾಡಿದೆ ಎಂದು ಟೀಕಿಸಿರುವ ಅಣ್ಣಾ ತಂಡ, ಮಸೂದೆ ವ್ಯಾಪ್ತಿಯಿಂದ ಕೆಳಹಂತದ ಆಡಳಿತವನ್ನು ದೂರ ಇಟ್ಟ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.
ದೇಣಿಗೆ ವಾಪಸಿಗೆ ಆಗ್ರಹ: ಅರವಿಂದ ಕೇಜ್ರಿವಾಲ್ ಅವರು ಅಣ್ಣಾ ತಂಡದ ಸಂಪನ್ಮೂಲವನ್ನು ನಿಯಂತ್ರಿಸಿದರೆ, ಹಜಾರೆ ಸ್ವಂತ ಖರ್ಚಿನಲ್ಲಿ ಆಂದೋಲನ ನಡೆಸಲು ಸಾಧ್ಯವಿಲ್ಲ; ಆದ ಕಾರಣ ಅಣ್ಣಾ ಹೆಸರಿನಲ್ಲಿ ಸಂಗ್ರಹಿಸಿದ್ದ ದೇಣಿಗೆ ಹಣವನ್ನು ರಾಳೇಗಣಸಿದ್ಧಿಯಲ್ಲಿರುವ ಟ್ರಸ್ಟ್ಗೆ ವಾಪಸ್ ನೀಡಬೇಕು ಎಂದು ಅಣ್ಣಾ ಪರವಾಗಿ ಬ್ಲಾಗ್ ಬರೆದು ಚರ್ಚೆಗೆ ಕಾರಣವಾಗಿದ್ದ ರಾಜು ಪರುಳೇಕರ್ ಆಗ್ರಹಿಸಿದ್ದಾರೆ.