ಬೆಂಗಳೂರು: ಸೊಗಸಾದ ಪ್ರದರ್ಶನ ನೀಡಿದ ಪಿಎಸ್ಪಿಬಿಯ ಸೌರಭ್ ವರ್ಮ ಹಾಗೂ ಸಯಾಲಿ ಗೋಖಲೆ ಅವರು ಇಲ್ಲಿ ನಡೆಯುತ್ತಿರುವ ಐಎಫ್ಸಿಐ ಅಖಿಲ ಭಾರತ ಮೇಜರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿನ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೌರಭ್ 21-13, 21-18ರಲ್ಲಿ ಎಚ್.ಎಸ್. ಪ್ರಣೋಯ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಸಾಯಿ ಪ್ರಣೀತ್ 21-17, 14-21, 21-15ರಲ್ಲಿ ಸುಮಿತ್ ರೆಡ್ಡಿ ವಿರುದ್ಧ ಗೆಲುವು ಪಡೆದರು.
ಮಹಿಳೆಯರ ವಿಭಾಗದಲ್ಲಿ ಸಯಾಲಿ ಗೋಖಲೆ 21-16, 21-16ರಲ್ಲಿ ನೇಹಾ ಪಂಡಿತ್ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಇನ್ನೊಂದು ಸೆಮಿಫೈನಲ್ನಲ್ಲಿ ತನ್ವಿ ಲಾಡ್ 21-13, 11-1ರಲ್ಲಿ ಎನ್.ಸಿಕ್ಕಿ ರೆಡ್ಡಿ (ನಿವೃತ್ತಿ) ಎದುರು ಗೆಲುವು ಪಡೆದರು.
ಪ್ರಣವ್-ಅಕ್ಷಯ್ಗೆ ಜಯ: ಪುರುಷರ ವಿಭಾಗದ ಡಬಲ್ಸ್ನ ಸೆಮಿಫೈನಲ್ ಪಂದ್ಯದಲ್ಲಿ ಪ್ರಣವ್ ಚೋಪ್ರಾ-ಅಕ್ಷಯ್ ದಿವಾಕರ್ ಜೋಡಿ 21-11, 16-21, 21-18ರಲ್ಲಿ ಸುಮಿತ್ ರೆಡ್ಡಿ- ಪ್ರಣೋಯ್ ವಿರುದ್ಧವೂ, ಸಾಯಿ ಪ್ರಣೀತ್-ಕೆ. ನಂದ ಗೋಪಾಲ ಜೋಡಿ 21-12, 21-19ರಲ್ಲಿ ವೆಂಕಟ್ ಗೌರವ್-ಮನೀಷ್ ಗುಪ್ತಾ ಮೇಲೂ ಗೆಲುವು ಪಡೆದು ಫೈನಲ್ಗೆ ಲಗ್ಗೆ ಇಟ್ಟಿತು.
ಪ್ರಜ್ಞಾ ಗಾಡೆ ಹಾಗೂ ಪ್ರಜಕ್ತಾ ಸಾವಂತ್ ಇದೇ ಟೂರ್ನಿಯ ಮಹಿಳೆಯರ ವಿಭಾಗದ ಡಬಲ್ಸ್ನಲ್ಲಿ 21-18, 21-15ರಲ್ಲಿ ಶ್ರುತಿ ಕುರಿಯನ್-ನಿತ್ಯ ಸೋಸಲೆ ಮೇಲೂ, ಅಪರ್ಣಾ ಬಾಲನ್-ಸಿಕಿ ರೆಡ್ಡಿ 21-11, 21-15ರಲ್ಲಿ ಜಿ.ಎಂ. ನಿಶ್ಚಿತಾ-ಎಸ್.ಆರ್. ಪೂರ್ವಶ್ರೀ ವಿರುದ್ಧವೂ ಜಯ ಪಡೆದ ಪ್ರಶಸ್ತಿಯ ಸನಿಹಕ್ಕೆ ಹೆಜ್ಜೆ ಇಟ್ಟಿತು.
ಮಿಶ್ರ ಡಬಲ್ಸ್ ವಿಭಾಗದ ನಾಲ್ಕರ ಘಟ್ಟದಲ್ಲಿ ಅರುಣ್ ವಿಷ್ಣು ಹಾಗೂ ಅಪರ್ಣಾ ಬಾಲನ್ ಗೆಲುವು ಪಡೆದರು.