ಬೆಂಗಳೂರು: ರಾಜ್ಯಸಭೆಯ ಶೇಕಡ 7ರಷ್ಟು ಸದಸ್ಯರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಮತ್ತು ಶೇ 17ರಷ್ಟು ಸದಸ್ಯರು ಸಾಧಾರಣ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಕಣ್ಗಾವಲು (ಎನ್ಇಡಬ್ಲ್ಯೂ) ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಗಳು ನಡೆಸಿದ ಜಂಟಿ ಸಮೀಕ್ಷೆ ಬಹಿರಂಗಪಡಿಸಿದೆ.
ರಾಜ್ಯಸಭೆಯ 12 ಸ್ಥಾನಗಳಿಗೆ ರಾಷ್ಟ್ರಪತಿಗಳು ಸದಸ್ಯರ ನಾಮನಿರ್ದೇಶನ ಮಾಡುತ್ತಾರೆ. ಈ 12 ಮಂದಿ ತಮ್ಮ ಆಸ್ತಿ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿಲ್ಲ. ಜಂಟಿ ಸಮೀಕ್ಷೆಯು ಒಟ್ಟು 227 ರಾಜ್ಯಸಭಾ ಸದಸ್ಯರ ಪ್ರಮಾಣಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿದೆ.
ಪರಿಶೀಲನೆಗೆ ಒಳಪಟ್ಟ ಸದಸ್ಯರ ಪೈಕಿ, ಕಾಂಗ್ರೆಸ್ನ ಸದಸ್ಯರ ಸರಾಸರಿ ಆಸ್ತಿ ₨ 16.74 ಕೋಟಿ. ಬಿಎಸ್ಪಿ ಸದಸ್ಯರ ಸರಾಸರಿ ಆಸ್ತಿ ₨ 13.82 ಕೋಟಿ. ಬಿಜೆಪಿ ಮತ್ತು ಸಿಪಿಎಂ ಪಕ್ಷಗಳ ಸದಸ್ಯರ ಸರಾಸರಿ ಆಸ್ತಿ ಕ್ರಮವಾಗಿ ₨ 8.51 ಕೋಟಿ ಮತ್ತು ₨ 39.65 ಲಕ್ಷ. ಎಲ್ಲ ಪಕ್ಷಗಳ ಸದಸ್ಯರ ಸರಾಸರಿ ಆಸ್ತಿ ₨ 20 ಕೋಟಿ.
ಶ್ರೀಮಂತ ಸದಸ್ಯರ ಪಟ್ಟಿಯಲ್ಲಿ ಜೆಡಿ(ಯು) ಪಕ್ಷದ ಮಹೇಂದ್ರ ಪ್ರಸಾದ್ (₨ 683 ಕೋಟಿ ಆಸ್ತಿ), ಪಕ್ಷೇತರ ಸದಸ್ಯ ವಿಜಯ್ ಮಲ್ಯ (₨ 615 ಕೋಟಿ) ಮತ್ತು ಸಮಾಜವಾದಿ ಪಕ್ಷದ ಜಯಾ ಬಚ್ಚನ್ (₨ 493 ಕೋಟಿ) ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ. ಕಡಿಮೆ ಆಸ್ತಿ ಹೊಂದಿರುವ ಸದಸ್ಯರ ಪೈಕಿ, ಬಿಜೆಪಿಯ ಅನಿಲ್ ದವೆ (₨ 2.75 ಲಕ್ಷ), ತೃಣಮೂಲ ಕಾಂಗ್ರೆಸ್ನ ಮೊಹಮ್ಮದ್ ನದೀಮುಲ್ಲಾ (₨ 3.19 ಲಕ್ಷ) ಮತ್ತು ಸಿಪಿಎಂನ ಶೈಮಲ್ ಚಕ್ರವರ್ತಿ (₨ 5.47 ಲಕ್ಷ) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಹಿರಿಯರ ಮನೆ ಎಂದೇ ಕರೆಸಿಕೊಳ್ಳುವ ರಾಜ್ಯಸಭೆಸದಸ್ಯರ ಶೈಕ್ಷಣಿತ ಅರ್ಹತೆ ಉತ್ತಮವಾಗಿದೆ ಎಂಬುದನ್ನು ಜಂಟಿ ಸಮೀಕ್ಷೆ ಸ್ಪಷ್ಟಪಡಿಸಿದೆ. ಶೇಕಡ 84ರಷ್ಟು ಸದಸ್ಯರು ಪದವಿ ಅಥವಾ ಉನ್ನತ ವ್ಯಾಸಂಗ ಮಾಡಿದವರಾಗಿದ್ದಾರೆ. ಶೇಕಡ 5ರಷ್ಟು ಸದಸ್ಯರು ಮಾತ್ರ ಎಸ್ಸೆಸ್ಸೆಲ್ಸಿ ಅಥವಾ ಅದಕ್ಕಿಂತ ಕಡಿಮೆ ಶೈಕ್ಷಣಿಕ ಅರ್ಹತೆಯವರು. ಅಂದಹಾಗೆ, ರಾಜ್ಯಸಭಾ ಸದಸ್ಯರ ಸರಾಸರಿ ವಯಸ್ಸು 80 ವರ್ಷಗಳು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.