ಮಂಗಲ್ದಾಯ್ (ಅಸ್ಸಾಂ) (ಪಿಟಿಐ): ಕಪ್ಪುಹಣದ ವಿರುದ್ಧ ಕಹಳೆ ಮೊಳಗಿಸಿರುವ ಯೋಗ ಗುರು ರಾಮದೇವ್ ಅವರ ಭದ್ರತಾ ವಾಹನ ಹರಿಹಾಯ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಪ್ರತಿ ವಾರ ಮಾರುಕಟ್ಟೆ ನಡೆಯುವ ಜನರಾಂ ಚೌಕ್ ಪ್ರದೇಶದಲ್ಲಿ ರಾಮದೇವ್ ಅವರ ಸೀಮಾ ಸುರಕ್ಷಾ ಬಲ್ಗೆ (ಎಸ್ಎಸ್ಬಿ) ಸೇರಿದ ಭದ್ರತಾ ವಾಹನ ಇಬ್ಬರ ಮೇಲೆ ಹರಿಹಾಯ್ದು ಈ ದುರ್ಘಟನೆ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹರಕಾಂತ ದತ್ತ (45) ಮತ್ತು ಸಿತಿನಾಥ ಶರ್ಮ (35) ಸಾವಿಗೀಡಾದವರು. ದುರಂತ ಸಂಭವಿಸಿದ್ದರಿಂದ ಕುಪಿತರಾದ ಜನ ಗುಂಪುಗೂಡಿ ಶವಗಳನ್ನು ಇರಿಸಿದ್ದ ಸಾರ್ವಜನಿಕ ಆಸ್ಪತ್ರೆ ಮುಂದೆ ಜಮಾಯಿಸಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.
ಆದರೆ ರಾಮ್ದೇವ್ ಅವರ ಕಚೇರಿ ಈ ವರದಿಯನ್ನು ನಿರಾಕರಿಸಿದೆ.
‘ಇದೊಂದು ಆಧಾರರಹಿತ ಸುದ್ದಿ. ದುರ್ಘಟನೆಯೇ ನಡೆದಿಲ್ಲ’ ಎಂದು ರಾಮದೇವ್ ಅವರ ವಕ್ತಾರ ಎಸ್.ಕೆ.ತಿಜಾರಾವಾಲಾ ಹೇಳಿಕೆ ನೀಡಿದ್ದಾರೆ