ನವದೆಹಲಿ (ಪಿಟಿಐ): ದೇಶದ ದಕ್ಷಿಣದ ತುದಿಯಲ್ಲಿರುವ ವಿವಾದಿತ ರಾಮ್ಸೇತು ಬದಲಾಗಿ ಧನುಷ್ಕೋಟಿ ಮೂಲಕ ಪರ್ಯಾಯ ಹಡಗು ಮಾರ್ಗ ನಿರ್ಮಿಸುವ ಬಗ್ಗೆ ತಜ್ಞರು ನೀಡಿರುವ ಅಧ್ಯಯನ ವರದಿಯನ್ನು ತನಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಭಾರತ- ಶ್ರೀಲಂಕಾ ನಡುವೆ ಸಂಪರ್ಕ ಕಲ್ಪಿಸುವ, ಕೇಂದ್ರದ ರೂ 2,240 ಕೋಟಿಯ ಸೇತು ಸಮುದ್ರಂ ಹಡಗು ಮಾರ್ಗ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪರ್ಯಾಯ ಸಾಧ್ಯತೆ ಕುರಿತು ವರದಿ ಸಲ್ಲಿಸಲು ಪ್ರಧಾನಿ ಮನಮೋಹನ್ ಸಮಿತಿ ನೇಮಿಸಿದ್ದರು.
2008ರಲ್ಲಿ ಪರಿಸರ ತಜ್ಞ ಆರ್.ಕೆ. ಪಚೌರಿ ನೇತೃತ್ವದಲ್ಲಿ ರಚಿಸಲಾಗಿದ್ದ ಆರು ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.
ರಾಮ್ಸೇತುವಿನ ಐತಿಹಾಸಿಕ ಮಹತ್ವ ಮತ್ತು ಹಡಗು ಮಾರ್ಗದಿಂದ ಪರಿಸರಕ್ಕೆ ಹಾನಿಯಾಗುವ ಕಾರಣ ಯೋಜನೆ ಕೈಬಿಡಲು ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅನೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲಾಗಿತ್ತು.