ಯಾದಗಿರಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಂಬನಿ ಮಿಡಿದಿದೆ.
ಇಲ್ಲಿಯ ಪರಿಷತ್ ಕಾರ್ಯಾಲಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸುಭಾಷಚಂದ್ರ ಕೌಲಗಿ, ಕವಿಗಳು, ವಿಮರ್ಶಕರು, ಸಾಹಿತಿಗಳು, ಸಂಶೋಧಕರು ಆಗಿದ್ದ ಶಿವರುದ್ರಪ್ಪನವರ ಅಗಲಿಕೆ-ಯಿಂದ ಕನ್ನಡ ಸಾಹಿತ್ಯಕ್ಕೆ ಅಗಾಧವಾದ ನಷ್ಟವಾಗಿದೆ. ಯಾವುದೇ ಸಿದ್ಧಾಂತಗಳಿಗೆ ಅಂಟಿಕೊಳ್ಳದೇ ಸಮನ್ವಯಶೀಲ ಕವಿಯಾಗಿ, ಜನಪರ ಮತ್ತು ಜೀವಪರವಾದ ಸಾಹಿತ್ಯ ರಚನೆಯಿಂದ ಉತ್ತಮ ಸಾಹಿತಿ ಎನಿಸಿಕೊಂಡಿದ್ದರು ಎಂದರು.
ಅಪಾರವಾದ ಶಿಷ್ಯ ಬಳಗವನ್ನು ಹೊಂದಿದ್ದ ಅವರು, ತಮ್ಮ ಶಿಷ್ಯವೃಂದವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಟ್ಟಿ ಬೆಳೆಸಿದ್ದರು. ಗಂಗೆಯ ಗಿರಿಶಿಖರಗಳಲ್ಲಿ, ಸೌಂದರ್ಯ ಮಿಮಾಂಸೆ, ಕಾವ್ಯರ್ಥ ಚಿಂತನ, ಕೃತಿಗಳು ಸಾಹಿತ್ಯ ಲೋಕದಲ್ಲಿ ಅವರ ಹೆಸರನ್ನು ಚಿರಂತನಗೊಳಿಸಿವೆ. ಸಾಮಗಾನ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಶಿವರುದ್ರಪ್ಪನವರು, ಆಧುನಿಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವಲ್ಲಿ ಬಹುವಾಗಿ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಪ್ರಕಾಶ ಅಂಗಡಿ, ಬಸವರಾಜ ಮಾಟ್ನಳ್ಳಿ, ಅಯ್ಯಣ್ಣ ಹುಂಡೇಕಾರ, ವಿ.ಸಿ. ರೆಡ್ಡಿ, ಬಸವಂತ್ರಾಯಗೌಡ ಮಾಲಿಪಾಟೀಲ ಮುಂತಾದವರು ಇದ್ದರು.
ಸಾಹಿತ್ಯ ಸೌರಭ ವೇದಿಕೆ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಸಾಹಿತ್ಯ ಸೌರಭ ವೇದಿಕೆ ಸಂತಾಪ ಸೂಚಿಸಿದೆ.
ರಾಷ್ಟ್ರಕವಿ ಎಂಬ ಹೆಗ್ಗಳಿಕೆ ಪಾತ್ರರಾದ ಪ್ರಥಮ ಸಾಹಿತಿ ಶಿವರುದ್ರಪ್ಪನವರು. ತಮ್ಮ ಸಾಹಿತ್ಯ ಕೃಷಿಯಿಂದ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಅದ್ಭುತ ಸಾಹಿತಿ, ಚಿಂತಕರಾಗಿದ್ದರು. ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ವೇದಿಕೆ ಅಧ್ಯಕ್ಷ ವೆಂಕಟರಾವ ಕುಲಕರ್ಣಿ, ಪಂ. ಬಸವರಾಜ ಶಾಸ್ತ್ರಿ, ಸಂಗಣ್ಣ ಹೋತಪೇಟ, ನರಸಿಂಹ ಗುಪ್ತ ಬಳಿಚಕ್ರ, ಎಂ.ಕೆ. ಬೀರನೂರ ಸಂತಾಪ ಸೂಚಿಸಿದ್ದಾರೆ.
ಜೆಡಿಎಸ್: ಕವಿ ಶಿವರುದ್ರಪ್ಪ ಅವರ ನಿಧನಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಕಂಬನಿ ಮಿಡಿದಿದೆ.
ಶಿವರುದ್ರಪ್ಪನವರ ಸಾಹಿತ್ಯದಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ. ಅವರ ಸಾಹಿತ್ಯ ಇಂದಿಗೂ ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಅವರಂಥ ಶ್ರೇಷ್ಠ ಸಾಹಿತಿಗಳನ್ನು ಕಳೆದುಕೊಂಡ ಕನ್ನಡದ ಜನತೆ ಅಪಾರ ನೋವುಂಟಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ, ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ, ಚನ್ನಪ್ಪಗೌಡ ಮೋಸಂಬಿ, ಎಸ್.ಪಿ. ನಾಡೇಕರ್ ಮುಂತಾದವರು ತಿಳಿಸಿದ್ದಾರೆ.
ಸಂಘಟನೆಗಳು: ರಾಷ್ಟ್ರಕವಿ ಜಿಎಸ್ಎಸ್ ನಿಧನಕ್ಕೆ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದ ತೀವ್ರ ಸಂತಾಪ ಸೂಚಿಸಿದ್ದು, ಮಹಾನ್ ಕವಿ ನಿಧನದಿಂದ ಕನ್ನಡ ನಾಡು ನುಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುಂಬಾರ, ಸಿದ್ಧಲಿಂಗರೆಡ್ಡಿ, ರಾಜು ಕಲಾಲ್, ಮೌನೇಶ ಸುರಪುರಕರ್, ಮಲ್ಲಿಕಾರ್ಜುನ ನಗನೂರ, ದೇವು ಬಿ.ಗುಡಿ, ಮಹೇಂದ್ರ ಗಣಪರೆಡ್ಡಿ, ದಶರಥ ಮುಂಡರಗಿ, ಜಲಾಲ್ ಪಟೇಲ್, ಹಣಮಂತ ಕಲಾಲ್, ಸಾಬರೆಡ್ಡಿ ಕಂಬನಿ ಮಿಡಿದಿದ್ದಾರೆ.
ಶಿವರುದ್ರಪ್ಪನವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಶಿವರುದ್ರಪ್ಪ ಅವರಂತಹ ಮೇಧಾವಿ ಸಾಹಿತಿಗಳನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ ಎಂದು ಕರವೇ (ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಸಂತಾಪ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.