ಕೂಡ್ಲಿಗಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಇನ್ಸ್ಪೈರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲ್ಲೂಕಿನ ಆಲೂರು ಗ್ರಾಮದ ಕೋಣದ ಮರಿಸ್ವಾಮಿ ಸರ್ಕಾರಿ ಹಿ.ಪ್ರಾ ಶಾಲೆ ಹಾಗೂ ಕಾನಾಮಡುಗು ಗ್ರಾಮದ ಶ್ರಿ ಶರಣಬಸವೇಶ್ವರ ಪ್ರೌಢಶಾಲೆಗಳು ಭಾಗವಹಿಸಿ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಆಲೂರು ಶಾಲೆಯ ಟಿಜಿಟಿ ಶಿಕ್ಷಕಿ ಜಿ.ವಿನುತಾ ಸುಭಾಸ್ಚಂದ್ರ ಅವರ ಮಾರ್ಗದರ್ಶನದಲ್ಲಿ 8ನೇ ತರಗತಿಯ ಐಶ್ವರ್ಯ, ಪರಿಸರ ಸ್ನೇಹಿ ಶೌಚಾಲಯ ಕೃಷಿಗೆ ಯೋಗ್ಯ ಎಂಬ ಪರಿಕಲ್ಪನೆಯ ವಿಜ್ಞಾನ ಮಾದರಿಯನ್ನು ಸಿದ್ಧಪಡಿಸಿ ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆದಿತ್ತು.
ಕಾನಾಮಡುಗಿನ ಶ್ರಿ ಶರಣ ಬಸವೇಶ್ವರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ. ದೇವರಾಜ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿ ಕೆ.ಎನ್.ಭಾನುಪ್ರಿಯ, ಜೈವಿಕ ಅನಿಲ ಸ್ಥಾವರ ಮತ್ತು ಸಾವಯವ ಕೃಷಿ ಎಂಬ ಪರಿಕಲ್ಪನೆಯ ವಿಜ್ಞಾನ ಮಾದರಿಯನ್ನು ಸಿದ್ಧಪಡಿಸಿ ಪ್ರದರ್ಶಿಸಿದ್ದರು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಟಿ.ನಾರಾಯಣ ಗೌಡ್ರು, ತಾಲ್ಲೂಕಿನ ನೋಡಲ್ ಅಧಿಕಾರಿಗಳು ಹಾಗೂ ಡಯಟ್ನ ಉಪ ಪ್ರಾಚಾರ್ಯ ರಾದ ಸಿ.ಹನುಮಕ್ಕ, ಕ್ಷೇತ್ರ ಶಿಕ್ಷಣಾಧಿ ಕಾರಿ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಮೈಲೇಶ್ ಬೇವೂರ್, ವಲಯ ಶಿಕ್ಷಣ ಸಂಯೋಜಕ ಎಸ್.ವಿ.ಸಿದ್ದಾರಾಧ್ಯ ಹಾಗೂ ಆಲೂರು ಸಿಆರ್ಪಿ ಸಿ. ಹಾಲೇಶ್, ಕುಲುಮೆಹಟ್ಟಿ ಸಿಆರ್ಪಿ ಜಿ.ಟಿ.ಸಿದ್ಧೇಶ್ವರ, ಮುಖ್ಯಗುರುಗಳಾದ ಡಾ.ಎ.ಕರಿಬಸಪ್ಪ ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯ ಶಿಕ್ಷಕ ಎಸ್.ಬಸವರಾಜ ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.