ಯಾದಗಿರಿ: ವ್ಯಾಪಾರಿಗಳಿಂದ ಸೇವೆಯಲ್ಲಿ ಅಸಮರ್ಪಕತೆ ಮತ್ತು ದೋಷ ಪೂರ್ಣ ನಿರ್ವಹಣೆ ಆಗಿದ್ದಲ್ಲಿ ಅಂತಹ ವ್ಯಕ್ತಿ ಮತ್ತು ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗೆ ಇದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ವಿದ್ಯಾವತಿ ಅಕ್ಕಿ ತಿಳಿಸಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ 1986ರಲ್ಲಿ ಗ್ರಾಹಕರ ಹಿತರಕ್ಷಣೆಗಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಿದೆ. ಈ ಹಿಂದೆ ವಸ್ತುಗಳ ಖರೀದಿಯಲ್ಲಿ ಆಗುವ ಮೋಸಕ್ಕೆ ಮಾತ್ರ ಗ್ರಾಹಕರು ಪರಿಹಾರ ಪಡೆಯಬಹುದಾಗಿತ್ತು. ಈಗ ವೈದ್ಯಕೀಯ ಸೇವೆಯಲ್ಲಿ ರೋಗಿಗಳಿಗೆ ಮತ್ತು ನ್ಯಾಯ ಕೋರಿ ವಕೀಲರಿಂದ ಅನ್ಯಾಯಕ್ಕೆ ಒಳಗಾಗುವ ಕಕ್ಷಿದಾರರು ಸಹ ಪರಿಹಾರ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಮಾತನಾಡಿ, ₨1 ಲಕ್ಷ ರಿಂದ ₨20 ಲಕ್ಷ ವರೆಗಿನ ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದವರು ಜಿಲ್ಲಾ ಗ್ರಾಹಕರ ವೇದಿಕೆಗೆ, ₨20 ಲಕ್ಷ ದಿಂದ ₨1 ಕೋಟಿವರೆಗಿನ ವಸ್ತು ಖರೀದಿಯಲ್ಲಿ ಮೋಸಕ್ಕೆ ಒಳಗಾದವರು ರಾಜ್ಯ ಗ್ರಾಹಕರ ವೇದಿಕೆಗೆ ಮತ್ತು ₨1 ಕೋಟಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದವರು ರಾಷ್ಟ್ರೀಯ ಗ್ರಾಹಕರ ಆಯೋಗಗಳಿಗೆ ದೂರು ನೀಡಿ ಪರಿಹಾರ ಪಡೆಯಬಹುದು. ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ನೋಂದಾಯಿತ ರಸೀದಿಗಳನ್ನು ಪಡೆಯಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ, ಗಂಜ್ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ ವೇದಿಕೆಯಲ್ಲಿದ್ದರು. ಡಿಡಿಪಿಐ ಕಛೇರಿ ವಿಷಯ ಪರಿವಿಕ್ಷಕ ಬಿ.ವೆಂಕೋಬ ಉಪನ್ಯಾಸ ನೀಡಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.