ಉಡುಪಿ: ಉಡುಪಿ ತಾಲ್ಲೂಕು ಜಯಕರ್ನಾಟಕ ರಿಕ್ಷಾ ಚಾಲಕ–ಮಾಲೀಕರ ಸಂಘಟನೆ ಜನರ ವಿಶ್ವಾಸ ಗಳಿಸುವ ಮೂಲಕ ರಾಜ್ಯದಲ್ಲೇ ಮಾದರಿ ಸಂಘಟನೆಯಾಗಬೇಕು ಹಾಗೂ ಸಂಘಟನೆಯ ಸದಸ್ಯರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರಾಜ್ಯ ಜಯಕರ್ನಾಟಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ದೀಪಕ್ ಹೇಳಿದರು.
ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಜಯಕರ್ನಾಟಕ ರಿಕ್ಷಾ ಚಾಲಕ– ಮಾಲೀಕರ ಸಂಘಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಿಕ್ಷಾ ಚಾಲಕ ಮಾಲೀಕರು ಪಕ್ಷ ರಾಜಕೀಯ ರಹಿತರಾಗಿ ಸಂಘಟನೆಯ ಸದಸ್ಯರಾಗಿ ವೃತ್ತಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು. ತೀವ್ರ ಅಸ್ವಸ್ಥರಾಗಿರುವ ಇಬ್ಬರು ರಿಕ್ಷ ಚಾಲಕರಿಗೆ ನೂತನ ಸಂಘದ ಅಧ್ಯಕ್ಷ ಕೆ. ರಮೇಶ್ ಶೆಟ್ಟಿ ವೈಯಕ್ತಿಕವಾಗಿ ಧನ ಸಹಾಯ ನೀಡಿದರು.
ರಾಜ್ಯ ಘಟಕದ ಪ್ರಧಾನ ಸಂಚಾಲಕ ಅಜಿತ್ ಪ್ರಸಾದ್, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಸಂಘಟನೆ ಗೌರವ ಕಾನೂನು ಸಲಹೆಗಾರ ಸಬೀನಾ ಆರ್.ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ರಿಕ್ಷಾ ಚಾಲಕ ರಾಜೀವಿ ಪೆರ್ಣಂಕಿಲ ಇದ್ದರು. ಅಣ್ಣಪ್ಪ ಕುಲಾಲ್ ಹೆಬ್ರಿ ಸಂಘದ ಪದಾಧಿಕಾರಿಗಳ ವಿವರ ವಾಚಿಸಿರು. ಸಂಘಟನಾ ಕಾರ್ಯದರ್ಶಿ ಮನೋಜ್ ಶೆಟ್ಟಿ ಸಂತೆಕಟ್ಟೆ ಸ್ವಾಗತಿಸಿ, ಶಿಕ್ಷಕ ಸತೀಶ್ ಶೆಟ್ಟಿ ತೋನ್ಸೆ ನಿರೂಪಿಸಿದರು.