ಬೆಂಗಳೂರು: ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ಉದ್ಯಮಿ ಅಶೋಕ್ ಎಂಬುವರಿಂದ 4 ಕೋಟಿ ರೂಪಾಯಿ ಪಡೆದು ವಂಚಿಸಿದ್ದ ಆರೋಪದ ಮೇಲೆ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಎಂ.ಜಿ.ರಾಮಚಂದ್ರನ್ (75), ಅವರ ಮಗಳು ಗೀತಾ (44) ಮತ್ತು ಮೈಸೂರಿನ ಮಹಮ್ಮದ್ ಫಾರೂಕ್ (62) ಬಂಧಿತರು.
ರಾಮಚಂದ್ರನ್ ಮೈಸೂರಿನಲ್ಲಿ ಈ ಹಿಂದೆ ಪುಸ್ತಕ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದರು. ಅದರಲ್ಲಿ ಲಾಭ ಇಲ್ಲ ಎಂದು ಅವರು ವಂಚನೆಗಿಳಿದಿದ್ದರು. ಫಾರೂಕ್ ಚಿನ್ನಾಭರಣ ವ್ಯಾಪಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ರಾಮಚಂದ್ರನ್ ಅವರಿಗೆ ಅಶೋಕ್ ಅವರು ಆಕಸ್ಮಿಕವಾಗಿ ಪರಿಚಯವಾಗಿದ್ದರು. ಅಶೋಕ್ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ರಾಮಚಂದ್ರನ್, `ನೀನು ನನ್ನ ಮಗನ ಸಮಾನ~ ಎಂದು ಹೇಳಿ ಅವರ ವಿಶ್ವಾಸ ಗಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹಣ ದ್ವಿಗುಣ ಮಾಡುವುದಾಗಿ ಮತ್ತು ಚಿನ್ನದ ಮೇಲೆ ಹಣ ಹೂಡಿ ಭಾರಿ ಪ್ರಮಾಣದ ಲಾಭ ಗಳಿಸುವುದಾಗಿ ಹೇಳಿ ಅವರು ಸುಮಾರು ನಾಲ್ಕು ಕೋಟಿ ರೂಪಾಯಿ ಪಡೆದಿದ್ದರು. ಹಣ ನೀಡಿದ ನಂತರ ಎಚ್ಚೆತ್ತುಕೊಂಡ ಅಶೋಕ್ ಹಣ ವಾಪಸ್ ನೀಡುವಂತೆ ಕೇಳಿದ್ದರು. ಆದರೆ ಅವರು ಹಣ ನೀಡಿರಲಿಲ್ಲ.
ಇದರಿಂದ ಮನನೊಂದ ಅಶೋಕ್ ಅವರು ರಾಮನಗರ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ರದಲ್ಲಿ ಅವರು ವಂಚನೆಯ ಬಗ್ಗೆ ತಿಳಿಸಿದ್ದರು. ಅಶೋಕ್ ಅವರ ಪತ್ನಿ ಭಾರತಿ ದೂರು ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.