ಹೈದರಾಬಾದ್, (ಐಎಎನ್ಎಸ್): ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐನಿಂದ ಬಂಧನಕ್ಕೊಳಗಾಗಿ ಚಂಚಲಗೂಡ ಕಾರಾಗೃಹದಲ್ಲಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಬಾವ ಶ್ರೀನಿವಾಸ ರೆಡ್ಡಿ ಅವರ ನ್ಯಾಯಾಂಗ ಬಂಧನವನ್ನು ಸಿಬಿಐ ವಿಶೇಷ ನ್ಯಾಯಾಲಯವು ಸೋಮವಾರ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.
ರೆಡ್ಡಿದ್ವಯರ ನ್ಯಾಯಾಂಗ ಬಂಧನದ ಅವಧಿಯು ಸೋಮವಾರ ಕೊನೆಗೊಂಡ ಕಾರಣ ಇಬ್ಬರನ್ನು ನ್ಯಾಯಾಯಲಕ್ಕೆ ಹಾಜರುಪಡಿಸಬೇಕಾಗಿತ್ತು. ಆದರೆ, ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿ ಬೆಂಬಲಿಸಿ ವಕೀಲರು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಹಾಗೂ ಭದ್ರತೆಯ ಕಾರಣದಿಂದ ನ್ಯಾಯಾಯಕ್ಕೆ ಕರೆತರಲಾಗಲಿಲ್ಲ.
ಕೊನೆಗೆ ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಂಚಲಗೂಡ ಕಾರಾಗೃಹದಲ್ಲಿರುವ ಉಭಯತ್ರರ ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದರು.