ಹಲೋ! ಪ್ರಶ್ನೆಗೆ ಉತ್ತರ ಹೇಳ್ಲಿಕ್ಕೆ ರೆಡಿ ಇದ್ದೀರಾ? ಹಾಗಾದರೆ ಇಗೋ ನಿಮ್ಮ ಪ್ರಶ್ನೆ. ಓಗರ ಎಂದರೇನು?
ಸಾರು.
ಓಹ್! ಸಾರಿ. ಉತ್ತರ ತಪ್ಪಾಗಿದೆ. ಅದು ಸಾರು ಅಲ್ಲ. ಉತ್ತರವನ್ನು ನಮ್ಮ ಸ್ನೇಹಿತರು ಹೇಳ್ತಾರೆ ಕೇಳಿ.
ಓಗರ ಅಂದರೆ ಅನ್ನ ಅಂತ.
ಮುಂದಿನ ಪ್ರಶ್ನೆ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಯಾರು?
ಡಾ. ರಹಮತ್ ತರೀಕೆರೆ - ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದವರು.
ನಿಮ್ಮ ಉತ್ತರ ಸರಿಯಾಗಿದೆ. ಅವರ ಕತ್ತಿಯಂಚಿನ ದಾರಿ ವಿಮರ್ಶಾ ಕೃತಿಗೆ ಈ ಪ್ರಶಸ್ತಿ ಬಂದಿದೆ.
ನಿಮಗೆ ಮುಂದಿನ ಪ್ರಶ್ನೆ. ಮಧ್ವಾಚಾರ್ಯರು ಹುಟ್ಟಿದ ಸ್ಥಳ ಯಾವುದು?
ಪಾಜಕ.
ಸರಿ, ನಿಮ್ಮ ಕೊನೇ ಪ್ರಶ್ನೆ. ಪ್ರಶ್ನೆ ತುಂಬಾ ಸುಲಭ ಇದೆ. ಬ್ರೈಲ್ ಲಿಪಿ ಕಂಡುಹಿಡಿದವರು ಯಾರು?
ಬ್ರೈಲ್.
ಬ್ರೈಲ್. ಸರಿ. ಅವರ ಪೂರ್ಣ ಹೆಸರು?
ಲೂಯಿ ಬ್ರೈಲ್.
ಹೀಗೆ, ಪ್ರತಿ ಸೋಮವಾರ ರಾತ್ರಿ 9.30ರಿಂದ 10.30 ರವರೆಗೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗುತ್ತಿರುವ ರೇಡಿಯೋ ಟೆಲಿಕ್ವಿ್ ಕಾರ್ಯಕ್ರಮ ಈಗಾಗಲೇ ನಾಲ್ಕು ಕಂತುಗಳನ್ನು ಮುಗಿಸಿದ್ದು ಇನ್ನೂ ಎಂಟು ಕಂತುಗಳಲ್ಲಿ ಪ್ರಸಾರವಾಗಲಿದೆ. ಪ್ರತಿ ಕಾರ್ಯಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಪೂರ್ವಭಾವಿ ಮತ್ತು ಅಂತಿಮ ಸುತ್ತು ಎಂದು ವಿಭಾಗಿಸಿಕೊಂಡಿದ್ದು ಪೂರ್ವಭಾವಿ ಸುತ್ತಿನಲ್ಲಿ ಎರಡು ಸುಲಭ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡೂ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಅಂತಿಮ ಸುತ್ತಿಗೆ ಅವಕಾಶ ಸಿಕ್ಕು ಅಲ್ಲಿ ಅವರು ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗೆ ಆರೂ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಸ್ಪರ್ಧಿಗೆ ರೂ.1,000/- ಬಹುಮಾನ.
ಒಂದು ಗಂಟೆ ಕಾಲ ನಡೆಯುವ ಈ ಫೋನ್ ಇನ್ ಟೆಲಿಕ್ವಿ್ನಲ್ಲಿ ಕೇಳುಗರಿಗಾಗಿಯೇ ಎಸ್.ಎಂ.ಎಸ್. ಪ್ರಶ್ನೆಯೊಂದನ್ನು ಕೊಡಲಾಗುತ್ತಿದ್ದು ಮರುದಿನ ಸಂಜೆಯವರೆಗೆ 5676744 ಸಂಖ್ಯೆಗೆ ಉತ್ತರಗಳನ್ನು ಕಳಿಸಿಕೊಡುವ ಅವಕಾಶ ಕಲ್ಪಿಸಲಾಗಿದೆ. ಸಹಸ್ರಾರು ಜನ ಸರಿ ಉತ್ತರ ನೀಡುವುದರಿಂದ ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುತ್ತಿದೆ. ವಿಜೇತರಿಗೆ ರೂ. 1000/- ಬಹುಮಾನವಿದೆ.
ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಾಯೋಜಿಸಿರುವ ಈ ರೇಡಿಯೋ ಟೆಲಿಕ್ವಿ್ ಕಾರ್ಯಕ್ರಮ ಕರ್ನಾಟಕದ ಮೂವತ್ತೂ ಜಿಲ್ಲೆಗಳ ಕೇಳುಗರ ಜೊತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳಗಳಿಂದಲೂ ಶ್ರೋತೃಗಳನ್ನು ಸೆಳೆದಿದೆ. ಕಳೆದ ವಾರದ ಕಾರ್ಯಕ್ರಮದಲ್ಲಿ ಸಾಂಗ್ಲಿಯಿಂದ ಉತ್ತರಗಳು ಬಂದದ್ದು ವಿಶೇಷವಾಗಿತ್ತು.
1988-89 ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಮೊದಲ ಕನ್ನಡ ಟೆಲಿಫೋನ್ ರಸಪ್ರಶ್ನೆ ಕಾರ್ಯಕ್ರಮ ಆರಂಭಿಸಿದ ಡಾ. ಬಸವರಾಜ ಸಾದರ್ ಅವರು 22 ವರ್ಷಗಳ ನಂತರ ಮತ್ತೊಮ್ಮೆ ಅದೇ ರೀತಿಯ ರಾಜ್ಯವ್ಯಾಪಿ ರೇಡಿಯೋ ಟೆಲಿಕ್ವಿ್ ಕಾರ್ಯಕ್ರಮ ಆರಂಭಿಸಿದ್ದಾರೆ.
ದಿನ ನಿತ್ಯ ನಾವು ಓದುವ ಪತ್ರಿಕೆಗಳು, ನೋಡುವ, ಕೇಳುವ ಟಿ.ವಿ. ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಏನಾದರೊಂದು ಹೊಸತು ಇದ್ದೇ ಇರುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ರೀತಿಯ ರಸಪ್ರಶ್ನೆಯ ಮೂಲಕ ಹೆಚ್ಚು ಮಾಹಿತಿ ದೊರೆಯುತ್ತಿದೆ.
ಅಂದ ಹಾಗೆ ನೀವೂ ಈ ರೇಡಿಯೋ ಟೆಲಿಕ್ವಿ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ? ಹಾಗಾದರೆ ತೆಗೆದುಕೊಳ್ಳಿ ಫೋನ್. ಇಂದೇ ರಾತ್ರಿ (ಪ್ರತಿ ಸೋಮವಾರ ರಾತ್ರಿ) ಡಯಲ್ ಮಾಡಿ ಈ ನಂಬರ್ಗಳಿಗೆ :
080 - 22370477 080 - 22370488 080 - 22370499 ಎಸ್.ಎಂ.ಎಸ್. ಸಂಖ್ಯೆ: 5676744
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.