ಆಲೂರು: ರೇಷ್ಮೆ ಕೃಷಿ ಲಾಭದಾಯಕವಾಗಿದೆ. ರೇಷ್ಮೆ ಇಲಾಖೆಯಿಂದ ತಾಂತ್ರಿಕ ಮಾಹಿತಿಯನ್ನು ಪಡೆದು ರೈತರು ಹೆಚ್ಚಿನ ಲಾಭ ಪಡೆಯಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಾಧ ಹೇಳಿದರು.
ಅವರು ಪಟ್ಟಣದ ಶಿಶು ಅಭಿವೃಧ್ದಿ ಯೋಜನಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ರೇಷ್ಮೆ ಕೃಷಿ ವಿಚಾರ ಸಂಕಿರಣ ಹಾಗೂ ಕ್ಷೇತ್ರೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ತಾಲ್ಲೂಕು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಬಿ.ರಾಜಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ರೇಷ್ಮೆ ಕೃಷಿ ಮಾಡುವವರು ರೋಗ ನಿಯಂತ್ರಣದ ಬಗ್ಗೆ ಎಚ್ಚರವಹಿಸಬೇಕು. ರೋಗಕ್ಕೆ ತುತ್ತಾದ ಬೆಳೆ ರಕ್ಷಿಸಲು ಯಾವುದೇ ಔಷಧ ಇರುವುದಿಲ್ಲ ಆದ್ದರಿಂದ ರೋಗ ಬರದಂತೆ ಎಚ್ಚರ ವಹಿಸಿ ಬೆಳೆ ಕಾಪಾಡಬೇಕು ಎಂದರು.
ಅರಕಲಗೋಡು ಪ್ರಗತಿಪರ ರೇಷ್ಮೆ ಬೆಳೆಗಾರ ಕುಮಾರ್ ಮತ್ತು ಕಣತೂರು ಪ್ರಗತಿಪರ ರೈತ ರಾಜಶೇಖರ್ ಅವರು ರೇಷ್ಮೆ ಬೆಳೆಯ ಮಹತ್ವದ ಕುರಿತು ಮಾತಾಡಿದರು.
ತಾಲ್ಲೂಕು ಪಂಚಾಯ್ತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಪ್ಪ ಇದ್ದರು.
ರೇಷ್ಮೆ ಕೃಷಿ ನಿರೀಕ್ಷಕ ದೇವೇಂದ್ರ ಕುಮಾರ್ ಸ್ವಾಗತಿಸಿ, ರೇಷ್ಮೆ ಕೃಷಿ ನಿರೀಕ್ಷಕ ವೆಂಕಟರಾಮಣಗೌಡ ವಂದಿಸಿದರು.