ಯಳಂದೂರು: ಪ್ರಸಕ್ತ ದಿನಗಳಲ್ಲಿ ರೇಷ್ಮೆ ಬೆಳೆಗೆ ಅಧಿಕ ಬೇಡಿಕೆ ಇದೆ. ಸಣ್ಣ ರೈತರಿಗೆ ಹೆಚ್ಚು ಆದಾಯ ತಂದು ಕೊಡಬಲ್ಲ ಬೆಳೆ ಬೆಳೆಯುವತ್ತ ರೈತರು ಮನಸು ಮಾಡಬೇಕು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರಾಚಪ್ಪ ಸಲಹೆ ನೀಡಿದರು.
ಪಟ್ಟಣದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಕರಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೇಷ್ಮೆ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವತಿಯಿಂದ ಅನೇಕ ಯೋಜನೆಗಳಿವೆ. ಕೇವಲ ನೂರು ರೇಷ್ಮೆ ಮೊಟ್ಟೆಯಿಂದ ಒಂದು ತಿಂಗಳಿಗೆ ಈಗಿರುವ ಮಾರುಕಟ್ಟೆ ದರದಲ್ಲಿ 18 ಸಾವಿರ ಸಂಪಾದನೆ ಮಾಡಬಹುದು.
ಇದರ ಜೊತೆಗೆ ಇದಕ್ಕೆ ಬೇಕಾಗುವ ಚಾಕಿಹುಳು, ಔಷಧಿ, ಉಪಕರಣ, ನರ್ಸರಿಗಳಿಗೆ ಸರ್ಕಾರದಿಂದ ಸಬ್ಸಿಡಿ ಕೂಡ ಲಭಿಸುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರ ಅವರು ಮಾತನಾಡಿದರು.
ಆಯ್ದ ಫಲಾನುಭವಿಗಳಿಗೆ ನ್ಯಾಪ್ಸಾಕ್ ಸ್ಪ್ರೇಯರ್, ಎರೆಹುಳು ಗೊಬ್ಬರ, ನೈಲಾನ್ ಬಲೆ, ಪ್ಯಾರಾಫಿನ್ ಪೇಪರ್ಗಳನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ ವಿತರಿಸಿದರು. ಸದಸ್ಯರಾದ ನಾಗೇಶ್, ರೇವಣ್ಣ, ನಿಂಗರಾಜು ಇತರರು ಹಾಜರಿದ್ದರು.