ಯಲಬುರ್ಗಾ: ಪಟ್ಟಣದ ಹೊರವಲಯದ ಪ್ರಮುಖ ಸಂಗನಾಳ ರಸ್ತೆಯಲ್ಲಿ ರೈತರು ರಸ್ತೆಯ ಮೇಲೆಯೇ ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರೀಶ ನಾಗಮ್ಮನವರ್, ಕಳಕೇಶ, ನಾರಾಯಣ ಹಾಗೂ ಇತರರು ಒತ್ತಾಯಿಸಿದ್ದಾರೆ.
ರೈತರು ಸಜ್ಜಿ ತೆನೆಗಳನ್ನು ರಸ್ತೆ ಮೇಲೆಯೇ ಹಾಕಿ ಹೋಗುವುದರಿಂದ ದ್ವಿಚಕ್ರ ವಾಹನಗಳಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿಂದೆ ರಾಶಿಯ ಮೇಲೆ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿ ಗಾಯಗಳಾದ ಪ್ರಕರಣಗಳು ಸಾಕಷ್ಟಿವೆ.
ರಾಶಿ ಮಾಡುವ ಸಂದರ್ಭದಲ್ಲಿ ರೈತರು ವಾಹನಗಳ ಗಾಲಿಗೆ ಸಿಲುಕಿ ಮೃತ ಪಟ್ಟ ಘಟನೆಗಳು ನಡೆದಿವೆ ಆದರೂ ರೈತರು ರಸ್ತೆಯ ಮೇಲೆ ರಾಶಿ ಮಾಡುವುದನ್ನು ನಿಲ್ಲಿಸಿಲ್ಲ, ಹೆಚ್ಚಾಗಿ ಸಜ್ಜಿ ಹಾಗೂ ಜೋಳದ ತೆನೆಗಳನ್ನು ಹಾಕಿ ರಾಶಿ ಮಾಡುವುದನ್ನೆ ನಿರಂತರವಾಗಿ ಮುಂದುವರಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ, ತಹಸೀಲ್ ಕಚೇರಿಯವರಾಗಲಿ ಹಾಗೂ ಪೊಲೀಸ್ ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಸಂಪೂರ್ಣ ವಿಫಲರಾಗಿದ್ದಾರೆ, ಇದರಿಂದಾಗಿ ಪ್ರಯಾಣಿಕರು ಹಾಗೂ ವಿವಿಧ ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಲೇಜಿನೊಳಗೆ ತ್ಯಾಜ್ಯ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದಿರುವ ಅಗಲವಾದ ರಸ್ತೆಯಲ್ಲಿಯೇ ಸಾಕಷ್ಟು ಸಂಖ್ಯೆಯಲ್ಲಿನ ರೈತರು ರಾಶಿ ಮಾಡುತ್ತಿರುವುದರಿಂದ ರಾಶಿಯ ದೂಳು ಕಾಲೇಜು ಆವರಣ ಹಾಗೂ ಕೊಠಡಿಯೊಳಗೆ ಹೋಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ತೊಂದರೆಯಾಗುತ್ತಿದೆ.
ರಾಶಿ ಮಾಡಿದ ನಂತರ ತ್ಯಾಜ್ಯವನ್ನು ರಸ್ತೆ ಬದಿಗೆ ಬಿಟ್ಟು ಹೋಗುವುದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಕಾಲೇಜಿನ ಎದುರಲ್ಲಿಯೇ ರಾಶಿ ರಾಶಿ ಸುರಿದು ಹೋಗುತ್ತಿರುವ ರೈತರು ತಮ್ಮ ಕೃಷ್ಟಿ ಚಟುವಟಿಕೆಯನ್ನು ಬೇರೆ ಸ್ಥಳದಲ್ಲಿ ಕೈಗೊಳ್ಳಬೇಕು. ರಸ್ತೆ ಮೇಲೆಯೇ ರಾಶಿ ಮಾಡುವವರಿಗೆ ಸಂಬಂಧಪಟ್ಟವರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಎಸ್ಎಫ್ಐ ಸಂಘಟನೆಯ ಹನಮಂತ ಭಜಂತ್ರಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.