ಮೈಸೂರು: ರೈಲಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಬೆಳಗೊಳ-ಸಾಗರಕಟ್ಟೆ ರೈಲು ನಿಲ್ದಾಣದ ನಡುವೆ ಇರುವ ಮಾದೇಗೌಡನಕೊಪ್ಪಲು ಬಳಿ ನಡೆದಿದೆ.
ಶ್ರೀರಂಗಪಟ್ಟಣ ತಾಲ್ಲೂಕು ಕೆ.ಆರ್. ಸಾಗರದ ವೆಂಕಟಯ್ಯನ ಮಗ ಶ್ರೀನಿವಾಸ್ (20) ಮತ್ತು ಗುರುವಯ್ಯ ಅವರ ಮಗ ಭರತ್ (19) ಮೃತಪಟ್ಟವರು.
ಶ್ರೀನಿವಾಸ ಮತ್ತು ಭರತ್ ಮಂಗಳವಾರ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಮೃತಪಟ್ಟಿರಬಹುದು. ಬೆಳಿಗ್ಗೆ ಛಿದ್ರವಾಗಿ ಬಿದ್ದಿದ್ದ ಮೃತದೇಹವನ್ನು ಗಮನಿಸಿದ ಗ್ರಾಮಸ್ಥರು ರೈಲ್ವೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.