ಬೆಂಗಳೂರು: ಹಳಿ ದಾಟುತ್ತ್ದ್ದಿದಾಗ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಕೆಂಗೇರಿ ರೈಲು ನಿಲ್ದಾಣದ ಸಮೀಪ ಶನಿವಾರ ನಡೆದಿದೆ.
ಕೆಂಗೇರಿ ನಿವಾಸಿ ಮುಕುಂದ ಎಂಬುವರ ಪುತ್ರ ಪುಷ್ಪಕ್ (18) ಮೃತಪಟ್ಟವರು. ಸುರಾನಾ ಕಾಲೇಜಿನಲ್ಲಿ 1ನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ನಿಲ್ದಾಣದ ಬಳಿಯೇ ಹಳಿ ದಾಟುವಾಗ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಪುಷ್ಪುಲ್ ರೈಲು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪುಷ್ಪಕ್ ಅವರು ಕಿವಿಗೆ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತ ಹೋಗುತ್ತಿದ್ದರು. ಆದ್ದರಿಂದ ರೈಲು ಬಂದ ಶಬ್ಧ ಕೇಳಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸಾವು: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಯಲಹಂಕದ ಸಂತೆ ವೃತ್ತದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಜಕ್ಕೂರು ನಿವಾಸಿಯಾಗಿದ್ದ ಸುಬ್ಬಯ್ಯ (58) ಮೃತಪಟ್ಟವರು.
ಸೆಕ್ಯುರಿಟಿ ಗಾರ್ಡ್ ಆಗಿದ್ದ ಅವರು ರಾತ್ರಿ 8 ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಸುಬ್ಬಯ್ಯ ಅವರ ಮೇಲೆ ಅದೇ ವಾಹನದ ಹಿಂದಿನ ಚಕ್ರ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.